ನವದೆಹಲಿ: ದೆಹಲಿಯಲ್ಲಿ 1984ರಲ್ಲಿ ನಡೆದ ಸಿಖ್ ವಿರೋಧಿ ದಂಗೆಯಲ್ಲಿ ಇಬ್ಬರನ್ನು ಸಜೀವ ದಹನ ಮಾಡಿದ ಆರೋಪದ ಮೇಲೆ ನಾಲ್ವರಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಬುಧವಾರ ಎತ್ತಿಹಿಡಿದಿದೆ.
ತಮ್ಮ ಮೇಲಿರುವ ಕೊಲೆ ಆರೋಪ ಕೈಬಿಡುವಂತೆ ಕೋರಿ ಈ ನಾಲ್ವರು ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ಪಿ. ಸದಾಶಿವಂ ಹಾಗೂ ಎಂ.ವೈ. ಇಕ್ಬಾಲ್ ಅವರಿದ್ದ ಪೀಠ ತಳ್ಳಿಹಾಕಿತು.
`ಮೃತ ದೇಹಗಳನ್ನು ದೆಹಲಿ ಪೊಲೀಸರು ಪತ್ತೆ ಮಾಡಿರಲಿಲ್ಲ. ಅಲ್ಲದೇ ಎಫ್ಐಆರ್ ದಾಖಲಿಸುವಲ್ಲಿ ವಿಳಂಬವಾಗಿತ್ತು. ಹಾಗಾಗಿ ನಮ್ಮನ್ನು ಇದರಲ್ಲಿ ತಪ್ಪಿತಸ್ಥರನ್ನಾಗಿ ಮಾಡಲಾಗದು' ಎಂದು ಮನವಿಯಲ್ಲಿ ಹೇಳಲಾಗಿತ್ತು.
ಈ ಪ್ರಕರಣದಲ್ಲಿ ದೆಹಲಿ ವಾಸಿಗಳಾದ ಲಾಲ್ ಬಹಾದೂರ್, ಸುರೇಂದರ್ ಪಿ. ಸಿಂಗ್, ರಾಮ್ಲಾಲ್ ಹಾಗೂ ವೀರೇಂದ್ರ ಸಿಂಗ್ಗೆ ದೆಹಲಿ ಹೈಕೋರ್ಟ್ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಪೀಠವು ಸಮರ್ಥಿಸಿತು. 2011ರಲ್ಲಿ ರಾಮ್ಲಾಲ್ ಮೃತಪಟ್ಟಿದ್ದ.
2008ರ ಆಗಸ್ಟ್ 27ರಂದು ವಿಚಾರಣಾ ನ್ಯಾಯಾಲಯ ನಾಲ್ವರನ್ನು ದೋಷಮುಕ್ತಗೊಳಿಸಿತ್ತು. ವಿಚಾರಣಾ ನ್ಯಾಯಾಲಯದ ಆದೇಶವನ್ನು ದೆಹಲಿ ಹೈಕೋರ್ಟ್ ತಳ್ಳಿ ಹಾಕಿತ್ತು.