ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿರುವ ಬೆನ್ನಲ್ಲೇ ಜಿಂದಾಲ್ನಿಂದ ಪೂರೈಕೆಯಾಗುತ್ತಿದ್ದ ವಿದ್ಯುತ್ನಲ್ಲಿ 300 ಮೆಗಾವಾಟ್ ಕಡಿಮೆಯಾಗಿದೆ. ಇದರಿಂದಾಗಿ ಸೋಮವಾರದಿಂದ ರಾಜ್ಯದಲ್ಲಿ ಅನಿಯಮಿತ ವಿದ್ಯುತ್ ಕಡಿತ ಜಾರಿಯಾಗುವ ಸಾಧ್ಯತೆ ಇದೆ.
ತಾಂತ್ರಿಕ ಕಾರಣಗಳಿಂದ ಜಿಂದಾಲ್ನ 300 ಮೆ.ವಾ. ಸಾಮರ್ಥ್ಯದ ಘಟಕ ಸ್ಥಗಿತಗೊಂಡಿದೆ. ಅಲ್ಲದೆ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ 210 ಮೆ.ವಾ. ಸಾಮರ್ಥ್ಯದ 6ನೇ ಘಟಕ ಶುಕ್ರವಾರದಿಂದ ಸ್ಥಗಿತವಾಗಿದೆ. ಇದರಿಂದಾಗಿ ಸುಮಾರು 500 ಮೆಗಾವಾಟ್ ವಿದ್ಯುತ್ ಕಡಿಮೆಯಾಗಿದೆ.
ರಾಯಚೂರಿನ 6ನೇ ಘಟಕ ಸೋಮವಾರದ ವೇಳೆಗೆ ಪುನರಾರಂಭವಾಗುವ ನಿರೀಕ್ಷೆ ಇದೆ. ಜಿಂದಾಲ್ ಘಟಕ ಪುನರಾರಂಭವಾಗಲು 4-5 ದಿನ ಬೇಕಾಗುತ್ತದೆ. ಕೊರತೆ ಬೀಳುವ ವಿದ್ಯುತ್ ಅನ್ನು ಬೇರೆ ಮೂಲಗಳಿಂದ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ವಿದ್ಯುತ್ ಪೂರೈಕೆಯಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯವಾಗಬಹುದು ಎಂದು ಇಂಧನ ಇಲಾಖೆಯ ಮೂಲಗಳು ತಿಳಿಸಿವೆ.
ಶುಕ್ರವಾರ ಒಟ್ಟು 173 ದಶಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗಿದೆ. ಈ ತಿಂಗಳಲ್ಲಿ ಬೇಡಿಕೆ ಪ್ರಮಾಣ 180 ದಶಲಕ್ಷ ಯೂನಿಟ್ಗೆ ಏರಲಿದೆ ಎಂದು ಅಂದಾಜಿಸಲಾಗಿದ್ದು, ನಿತ್ಯ ಸುಮಾರು 1200 ಮೆಗಾವಾಟ್ ಖರೀದಿ ಮಾಡಲಾಗುತ್ತಿದೆ. ಶುಕ್ರವಾರ ಬೇಡಿಕೆ ಪ್ರಮಾಣ ಗರಿಷ್ಠ 7,979 ಮತ್ತು ಕನಿಷ್ಠ 6,188 ಮೆಗಾವಾಟ್ ಇತ್ತು. ಕೇಂದ್ರದಿಂದ 1,815 ಮೆಗಾವಾಟ್ ವಿದ್ಯುತ್ ಪೂರೈಕೆಯಾಗಿದೆ. ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಿಂದ 1,329 ಮೆಗಾವಾಟ್ ಉತ್ಪಾದನೆಯಾಗಿದೆ.