ಲಖನೌ (ಪಿಟಿಐ): ಬಾಂದಾ ಜಿಲ್ಲೆಯ ಕಾರಿಯಾ ಕಾಲುವೆ ಮೇಲೆ ನಿರ್ಮಾಣ ಹಂತದ ಸೇತುವೆಯನ್ನು ವೀಕ್ಷಿಸಿದ್ದಕ್ಕಾಗಿ ಇದೀಗ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಉತ್ತರ ಪ್ರದೇಶ ಲೋಕೋಪಯೋಗಿ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಈ ನಾಯಕರು ಸ್ಥಳದಿಂದ ತೆರಳಿದ ಸಂದರ್ಭದಲ್ಲಿ ಸೇತುವೆಯ ಕಾಂಕ್ರೀಟ್ ಹಲಗೆ ಕುಸಿದಿರುವುದು ವಿವಾದಕ್ಕೆ ಕಾರಣವಾಗಿದೆ. ಇದರಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾದ ರೀಟಾ ಬಹುಗುಣ ಜೋಶಿ, ಶಾಸಕ ವಿವೇಕ್ ಸಿಂಗ್ ಅವರ ಪಾತ್ರವನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಇಲಾಖೆ ಹೇಳಿದೆ.
`ಇದೇ 12ರಂದು ನಡೆದ ಈ ಘಟನೆಯಲ್ಲಿ ಕೆಲ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಸೇತುವೆಯ ಆಧಾರಸ್ತಂಭವನ್ನು ತೆಗೆದುಹಾಕಿದ್ದಾರೆ. ರಾಹುಲ್ ಅವರ ಜೊತೆ ಈ ಮುಖಂಡರು ಸೇತುವೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದ ದೃಶ್ಯವನ್ನು ಕೆಲವು ಸುದ್ದಿ ವಾಹಿನಿಗಳು ಪ್ರಸಾರ ಮಾಡಿವೆ. ಭೇಟಿ ಸಂದರ್ಭದಲ್ಲಿ ಪಕ್ಷದ ಸಹೋದ್ಯೋಗಿಗಳು ರಾಹುಲ್ ಅವರ ಭದ್ರತೆಯನ್ನು ಸಹ ಕಡೆಗಣಿಸಿದ್ದು ಯಾಕೆ ಎಂಬ ಪ್ರಶ್ನೆ ಎದುರಾಗುತ್ತದೆ~ ಎಂದು ಇಲಾಖೆಯ ವಕ್ತಾರರು ಹೇಳಿದ್ದಾರೆ.
ಈ ಆರೋಪವನ್ನು ಅಲ್ಲಗಳೆದಿರುವ ವಿವೇಕ್ ಸಿಂಗ್, ಸಾರ್ವಜನಿಕರ ಹಣದೊಂದಿಗೆ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸುವುದು ಜನಪ್ರತಿನಿಧಿಗಳ ಹಕ್ಕು ಎಂದು ಸಮರ್ಥಿಸಿಕೊಂಡಿದ್ದಾರೆ.