ಯಲಹಂಕ: ಪಡಿತರ ಚೀಟಿ ವಿತರಣೆಯಲ್ಲಿ ಉಂಟಾಗುತ್ತಿರುವ ಲೋಪಗಳನ್ನು ಸರಿಪಡಿಸಲು ಸರ್ಕಾರಗಳು ಎಷ್ಟೇ ಮಾನದಂಡಗಳನ್ನು ವಿಧಿಸಿದರೂ ಸಹ, ಪಡಿತರ ಚೀಟಿ ದುರುಪಯೋಗವಾಗುವುದನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕ ಕೃಷ್ಣ ಬೈರೇಗೌಡ ಬೇಸರ ವ್ಯಕ್ತಪಡಿಸಿದರು.
ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ದೊಡ್ಡಜಾಲ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಕಾಯಂ ಪಡಿತರ ಚೀಟಿ ವಿತರಿಸಿ ಅವರು ಮಾತನಾಡಿದರು.
ಅಂಕಿ- ಸಂಖ್ಯೆಗಳ ಪ್ರಕಾರವೇ ಬಡವರಿಗೆ ಪಡಿತರ ಚೀಟಿ ವಿತರಿಸಿದರೂ, ಇನ್ನಷ್ಟು ಬಡವರು ಹೊಸದಾಗಿ ಅರ್ಜಿ ನೋಂದಣಿ ಮಾಡುತ್ತಿರುವುದರಿಂದ ಪಡಿತರ ಚೀಟಿಗಳು ಎಲ್ಲಿ ಹೋಗುತ್ತಿವೆ ಎಂಬುದು ಯಾವುದೇ ಸರ್ಕಾರಗಳಿಗೆ ಯಕ್ಷ ಪ್ರಶ್ನೆಯಾಗಿ ಉಳಿದಿದೆ ಎಂದರು.
ಒಟ್ಟು 380 ಫಲಾನುಭವಿಗಳಿಗೆ ಕಾಯಂ ಪಡಿತರ ಚೀಟಿ, 200 ಮಂದಿಗೆ ಹಿರಿಯ ನಾಗರಿಕರ ಗುರುತಿನ ಚೀಟಿ ಹಾಗೂ ಪಂಚಾಯಿತಿ ವತಿಯಿಂದ ಇಂದಿರಾ ಆವಾಜ್ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು 13 ಫಲಾನುಭವಿಗಳಿಗೆ ರೂ 1.15 ಲಕ್ಷ ಸಹಾಯಧನದ ಚೆಕ್ ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಅಶೋಕನ್, ದಾನೇಗೌಡ, ಶುಭಾ ನರಸಿಂಹಮೂರ್ತಿ, ತಾ.ಪಂ.ಉಪಾಧ್ಯಕ್ಷೆ ಅರುಣಾ ಮಂಜುನಾಥ್, ಸದಸ್ಯ ಗುರುಮೂರ್ತಿ, ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಎಂ.ಆರ್.ರೂಪಾ ಉಮೇಶ್, ಆಂಜಿನಪ್ಪ, ಉಪಾಧ್ಯಕ್ಷ ಬಿ.ಎನ್.ಲಕ್ಷ್ಮಯ್ಯ, ಮಾಜಿ ಅಧ್ಯಕ್ಷೆ ಉಮಾ ಶ್ರೀನಿವಾಸಯ್ಯ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.