ಕಾರ್ಕಳ: ಸರ್ಕಾರಿ ಜಮೀನಿನಲ್ಲಿ ವಾಸ್ತವ್ಯ ಇರುವ ಮನೆ ಜಾಗವನ್ನು ಈ ಹಿಂದೆ 2001ರಲ್ಲಿ ಕೊಟ್ಟ ರೀತಿಯಲ್ಲಿ ಪುನಃ ಮಂಜೂರು ಮಾಡುವವರಿಗೆ ಸೂಕ್ತ ಕಾನೂನು ತಿದ್ದುಪಡಿ ಮಾಡಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಶಾಸಕ ಎಚ್.ಗೋಪಾಲ ಭಂಡಾರಿ ತಿಳಿಸಿದ್ದಾರೆ.
ಕಳೆದ 4-5 ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ವಾಸ್ತವ್ಯವಿರುವ ಬಡವರ ಸ್ಥಳವನ್ನು ಸಕ್ರಮಗೊಳಿಸುವ ಬಗ್ಗೆ ಅನೇಕ ಬಾರಿ ಮನವಿ ಮಾಡಿದರೂ ರಾಜ್ಯ ಸರ್ಕಾರ ಮನವಿಗೆ ಸ್ಪಂದಿಸಿಲ್ಲ. ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು ಯಾವುದೇ ಚರ್ಚೆಗೂ ಆಸ್ಪದ ಕೊಡದೇ ಅವೈಜ್ಞಾನಿಕವಾದ ಕಾನೂನು ಮಾಡಿದೆ ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಇದರಲ್ಲಿ ಅನೇಕ ದೋಷಗಳಿದ್ದು, ಪಟ್ಟಣ ಪ್ರದೇಶ ಮತ್ತು ಅದರ ಸುತ್ತ ಮುತ್ತಲಿರುವ ಎಲ್ಲಾ ಗ್ರಾಮಗಳನ್ನು ಮಹಾನಗರಪಾಲಿಕೆಯಿಂದ 18 ಕಿಮೀ, ನಗರ ಸಭೆಗಿಂತ 10 ಕಿಮೀ ಹಾಗೂ ಪುರಸಭೆಯಿಂದ 5 ಕಿಮೀ ದೂರದ ನಿವೇಶನ ಮಂಜೂರಾತಿಗೆ ಅವಕಾಶವೇ ಕೊಟ್ಟಿಲ್ಲ. ಗೋಮಾಳ, ಡೀಮ್ಡಫಾರೆಸ್ಟ್, ಕುಮ್ಕಿಯಲ್ಲಿರುವ ಅಕ್ರಮ ವಾಸಿಗಳಿಗೆ ಈ ಕಾನೂನಿನಲ್ಲಿ ಮಂಜೂರಾತಿಗೆ ಅವಕಾಶವಿಲ್ಲ. ಭೂರಹಿತರು, ನಗರ, ಪಟ್ಟಣ, ಗ್ರಾಮೀಣ ಪ್ರದೇಶ ಎಲ್ಲೇ ವಾಸ್ತವ್ಯದಲ್ಲಿದ್ಧರೂ ಅವರಿಗೆ ಜಮೀನು ಮಂಜೂರು ಮಾಡಬೇಕು ಎಂದು ವಿಧಾನಸಭೆಯಲ್ಲಿ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.