ಕೊಪ್ಪಳ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಪಶು ಸಂಗೋಪನಾ ಸಚಿವ ರೇವೂ ನಾಯಕ ಬೆಳಮಗಿ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ.ನೀತಿ ಸಂಹಿತೆಗೆ ವಿರುದ್ಧವಾಗಿ ಬೆಳಮಗಿ ಅವರು ಜಿಲ್ಲೆಯ ವ್ಯಾಪ್ತಿಯಲ್ಲಿ ಸರ್ಕಾರಿ ವಾಹನ ಬಳಸಿದ್ದು, ಈ ಸಂಬಂಧ ಚುನಾವಣಾ ವೀಕ್ಷಕ ಎಸ್.ಕಿಶೋರ್ ಕೇಂದ್ರ ಅವರು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಪರ ಮತ ಯಾಚನೆಗಾಗಿ ಸೆ. 9ರಂದು ನಗರದಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ರೇವೂ ನಾಯಕ ಬೆಳಮಗಿ ಕಾರನ್ನು ನಗರದಿಂದ 15 ಕಿ.ಮೀ. ದೂರದಲ್ಲಿ ಕೊಪ್ಪಳ-ಮುನಿರಾಬಾದ್ ನಡುವೆ ಇರುವ ಸಿಮ್ಲಾ ಡಾಭಾ ಬಳಿ ನಿಲ್ಲಿಸಲಾಗಿತ್ತು.
ಇದನ್ನು ಗಮನಿಸಿದ ಚುನಾವಣಾ ವೀಕ್ಷಕರು, ಜಿಲ್ಲೆಯ ವ್ಯಾಪ್ತಿಯಲ್ಲಿ ಸಚಿವರು ಬಳಸುವ ಸರ್ಕಾರಿ ವಾಹನವನ್ನು ನಿಲ್ಲಿಸುವುದು ನೀತಿಸಂಹಿತೆ ಉಲ್ಲಂಘನೆಯಾಗುತ್ತದೆ. ಹೀಗಾಗಿ ತಮ್ಮ ವಾಹನವನ್ನು ಹಿಂಬಾಲಿಸಿ ನಗರಕ್ಕೆ ಆಗಮಿಸುವಂತೆ ಸಚಿವರ ಕಾರು ಚಾಲಕನಿಗೆ ಸೂಚಿಸಿದ್ದರು.
ವೀಕ್ಷಕರ ಮಾತಿನಂತೆ ನಗರಕ್ಕೆ ಬಾರದ ಚಾಲಕ ವಾಹನದೊಂದಿಗೆ ಹೊಸಪೇಟೆಯತ್ತ ತೆರಳಿ ನಂತರ ಸಚಿವರನ್ನು ಕರೆದುಕೊಂಡು ಹೋಗಿದ್ದಾನೆ. ಇದು ನೀತಿ ಸಂಹಿತೆ ಉಲ್ಲಂಘನೆ ಎಂದು ಪರಿಗಣಿಸಿರುವ ವೀಕ್ಷಕರು ಸಚಿವ ಬೆಳಮಗಿ ವಿರುದ್ಧ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ತಿಳಿಸಿದ್ದಾರೆ.