ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗೆ ನೀರೆಯರ ಪರದಾಟ

Last Updated 5 ಏಪ್ರಿಲ್ 2011, 8:50 IST
ಅಕ್ಷರ ಗಾತ್ರ

ಚಾಮರಾಜನಗರ: ಮೂರು ದಿನಕ್ಕೊಮ್ಮೆ ಕುಡಿಯಲು ನೀರು ಪೂರೈಕೆ. ಮಧ್ಯರಾತ್ರಿ ನೀರು ಪೂರೈಸುವ ಪರಿಪಾಠ. ದುರಸ್ತಿಯಾಗದ ನೀರಿನ ಟ್ಯಾಂಕ್. ಹೊಸ ಟ್ಯಾಂಕ್ ನಿರ್ಮಾಣ ನೆನೆಗುದಿಗೆ. ದಿನನಿತ್ಯವೂ ನೀರಿಗಾಗಿ ಮಹಿಳೆಯರು ಪರದಾಟ!  -ಇದು ನಗರಸಭೆ ವ್ಯಾಪ್ತಿಯ ಸೋಮವಾರಪೇಟೆಯ ಚಿತ್ರಣ. ಒಂದು ಮತ್ತು ಎರಡನೇ ವಾರ್ಡ್‌ನ ನಾಗರಿಕರು ಈಗ ಕುಡಿ ಯುವ ನೀರಿಗೆ ತೀವ್ರ ತೊಂದರೆ ಅನುಭವಿಸು ವಂತಾಗಿದೆ. ಇಲ್ಲಿರುವ ಸುಮಾರು 5 ಸಾವಿರದಷ್ಟು ಜನರಿಗೆ ಅಗತ್ಯಕ್ಕೆ ಅನುಗುಣವಾಗಿ ನೀರು ಸರಬ ರಾಜು ಆಗುತ್ತಿಲ್ಲ. ಹಾಲಿ ಇರುವ ನೀರು ಪೂರೈಕೆ ಟ್ಯಾಂಕ್‌ಗಳು ಶಿಥಿಲಗೊಂಡಿದ್ದು, ದುರಸ್ತಿ ಕಂಡಿಲ್ಲ.

ಐದು ಸಾವಿರ ಹಾಗೂ ಏಳೂವರೆ ಸಾವಿರ ಲೀಟರ್ ಸಾಮರ್ಥ್ಯದ ಎರಡು ಟ್ಯಾಂಕ್‌ಗಳಿವೆ. ಅನಿಯಮಿತವಾಗಿ ನೀರು ಪೂರೈಸುವ ಪರಿಣಾಮ ಟ್ಯಾಂಕ್‌ಗಳು ತುಂಬುತ್ತಿಲ್ಲ. ಇದರಿಂದ ನಾಗರಿಕರು ಹೆಚ್ಚು ತೊಂದರೆ ಅನುಭವಿಸುವಂತಾಗಿದೆ.  2 ವರ್ಷದ ಹಿಂದೆ 50 ಲಕ್ಷ ರೂ ವೆಚ್ಚದಲ್ಲಿ ಹೊಸ ಟ್ಯಾಂಕ್ ನಿರ್ಮಾಣಕ್ಕೆ ನಗರಸಭೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಇಂದಿಗೂ ಕಾರ್ಯಗತಗೊಂಡಿಲ್ಲ. ಸೋಮವಾರಪೇಟೆಯಲ್ಲಿ ಪ್ರಸ್ತುತ 14 ಕೈಪಂಪ್‌ಗಳಿವೆ. ಅವುಗಳಲ್ಲಿ 3 ದುರಸ್ತಿಯಲ್ಲಿವೆ. ಉಳಿದ ಕೈಪಂಪ್‌ಗಳಲ್ಲಿ ನೀರು ಕೂಡ ಅತ್ಯಲ್ಪ ಪ್ರಮಾಣದಲ್ಲಿ ಬರುತ್ತಿದೆ. ಅನಿವಾರ್ಯವಾಗಿ ನಾಗರಿಕರು ಸರದಿ ಸಾಲಿನಲ್ಲಿ ನಿಂತು ನೀರು ಹಿಡಿಯಬೇಕಿದೆ.

ನಗರಸಭೆಗೆ ಸಾಕಷ್ಟು ಅನುದಾನ ಬಂದಿದೆ. ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ಈ ಪ್ರದೇಶದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಗೊಂಡಿಲ್ಲ. ಅನುದಾನ ಹಂಚಿಕೆಯಲ್ಲೂ ತಾರತಮ್ಯ ನಡೆದಿದೆ ಎಂಬುದು ನಾಗರಿಕರ ಆರೋಪ. ಎಲ್ಲೆಡೆ ತೆರೆದ ಚರಂಡಿ ವ್ಯವಸ್ಥೆಯಿದೆ. ಇದರಿಂದ ಕಲ್ಮಷ ವಾತಾವರಣ ಸೃಷ್ಟಿಯಾಗಿದೆ. ಚರಂಡಿ ಸ್ವಚ್ಛತೆಗೆ ನಗರಸಭೆಯ ಪೌರ ಕಾರ್ಮಿಕರು ಇಲ್ಲಿಗೆ ಭೇಟಿ ನೀಡುವುದು ಅಪರೂಪ. ಬಂದರೂ ಸಮರ್ಪಕವಾಗಿ ಕಸ ವಿಲೇವಾರಿ ಮಾಡುತ್ತಿಲ್ಲ. ಜತೆಗೆ, ವರಾಹ ಸಂಕುಲ ಹಾಗೂ ಬಿಡಾಡಿ ದನಗಳ ಕಾಟದಿಂದ ಮತ್ತಷ್ಟು ಕಲ್ಮಷ ವಾತಾವರಣ ಸೃಷ್ಟಿಯಾಗುತ್ತಿದೆ.

ಬಹುತೇಕ ರಸ್ತೆಗಳು ಡಾಂಬರೀಕರಣಗೊಂಡಿಲ್ಲ. ಹೀಗಾಗಿ, ಸಂಚಾರಕ್ಕೂ ಕಷ್ಟಕರ. ಈ ಬಗ್ಗೆ ನಗರಸಭೆಗೆ ಮನವಿ ಸಲ್ಲಿಸಿದರೂ ಪ್ರಯೋಜನ ವಾಗಿಲ್ಲ. ಜನಪ್ರತಿನಿಧಿಗಳು ಕೂಡ ಗಮನ ಹರಿಸುತ್ತಿಲ್ಲ ಎಂದು ದೂರುತ್ತಾರೆ ನಾಗರಿಕರು. ‘ನಗರ ಹೊರವಲಯದಲ್ಲಿರುವ ವಾರ್ಡ್‌ಗಳ ಅಭಿವೃದ್ಧಿಗೆ ನಗರಸಭೆ ಆಡಳಿತ ನಿರ್ಲಕ್ಷ್ಯವಹಿಸುತ್ತಿದೆ. ಇದರಿಂದ ನಿವಾಸಿಗಳು ತೊಂದರೆ ಪಡುವುದು ಹೆಚ್ಚು. ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸಲು ಮುಂದಾಗಬೇಕು. ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು. ಅನುದಾನದ ಹಂಚಿಕೆಯಲ್ಲಿ ಆಗಿರುವ ತಾರತಮ್ಯ ಸರಿಪಡಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚು ಸಾಮರ್ಥ್ಯದ ಹೊಸ ಟ್ಯಾಂಕ್ ನಿರ್ಮಿಸಿ ನೀರು ಪೂರೈಕೆಗೆ ಒತ್ತು ನೀಡಬೇಕು’ ಎಂಬುದು ನಾಗರಿಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT