ಮಳವಳ್ಳಿ: ನೂತನ ಪಿಂಚಣಿ ಯೋಜನೆಯ ಮಸೂದೆ ಜಾರಿ ಖಂಡಿಸಿ ಸೋಮವಾರ ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಸದಸ್ಯರು ಸೋಮವಾರ ಇಲ್ಲಿ ಕೆಲ ಸಮಯ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಎಂ.ಆರ್. ರಾಜೇಶ್ ಅವರಿಗೆ ಮನವಿ ಸಲ್ಲಿಸಿದರು.
ನೂತನ ಪಿಂಚಣಿ ಯೋಜನೆ ವಿರುದ್ಧ ಘೋಷಣೆಗಳನ್ನು ಕೂಗುತ್ತ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದರು.
ಒಕ್ಕೂಟದ ಜಿಲ್ಲಾ ಮುಖಂಡ ಜಿ.ವಿ. ಶಿವಕುಮಾರ ಮಾತನಾಡಿ, ನೂತನ ಪಿಂಚಣಿ ಯೋಜನೆಯು ಸರ್ಕಾರಿ ನೌಕರರಿಗೆ ಮಾರಕವಾಗಲಿದೆ. ಇದರ ವಿರುದ್ಧ ಹೆಚ್ಚಿನ ಹೋರಾಟ ಅಗತ್ಯವಿದೆ. ನೌಕರರಿಂದ ಪ್ರತಿ ತಿಂಗಳು ಸಂಬಳದಲ್ಲಿ ಶೇ 10ರಷ್ಟನ್ನು ಹಾಗೂ ಅಷ್ಟೇ ಮೊತ್ತದ ಹಣವನ್ನು ಸರ್ಕಾರ ನೀಡಿ, ಅದನ್ನು ವಿವಿಧ ಖಾಸಗಿ ಕಂಪೆನಿಗಳ ಷೇರುಗಳಲ್ಲಿ ತೊಡಗಿಸಲಾಗುತ್ತದೆ. ಆ ಕಂಪೆನಿ ಲಾಭ ಗಳಿಸಿದರೆ ಪಿಂಚಣಿ ದೊರೆಯುತ್ತದೆ. ಇಲ್ಲದೆ ಹೋದರೆ ಪಿಂಚಣಿ ಪಡೆಯಲು ಸಾಧ್ಯವಿಲ್ಲ. ಈ ಯೋಜನೆ ಬಗ್ಗೆ ನಿರ್ದಿಷ್ಟ ಕಾನೂನನ್ನು ರಚಿಸದೆ ಏಕಾಏಕಿ ನೌಕರರ ಹಣವನ್ನು ಷೇರು ಮಾರುಕಟ್ಟೆಗೆ ತೊಡಗಿಸುವುದರಿಂದ ನಮಗೆ ಯಾವ ರೀತಿ ಪಿಂಚಣಿ ದೊರೆಯುತ್ತದೆ ಎಂಬ ಸ್ಪಷ್ಟತೆ ಇಲ್ಲ. ಆದ್ದರಿಂದ ಈ ಮಸೂದೆ ಕೈ ಬಿಡಬೇಕೆಂದು ಆಗ್ರಹಿಸಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎಂ. ಮಲ್ಲೇಶ್, ಕಾರ್ಯದರ್ಶಿ ರುದ್ರಯ್ಯ, ಖಜಾಂಚಿ ರೇಣುಕಾ, ಮಹದೇವ, ಅಚ್ಯುತಮೂರ್ತಿ, ಪ್ರಶಾಂತ್ಬಾಬು, ಶೈಲಜಾ, ಅಪ್ಪಾಜಿಗೌಡ, ಬಸವಣ್ಣ ಹಲವರು ಇದ್ದರು.