ಚಿತ್ರದುರ್ಗ: ಕೋಟೆ ಆವರಣದಲ್ಲಿ ಶನಿವಾರ ಚಿತ್ರನಟ ಪುನೀತ್ ರಾಜ್ಕುಮಾರ್ ಅವರನ್ನು ವೀಕ್ಷಿಸಲು ನೂರಾರು ಅಭಿಮಾನಿಗಳು ದಂಡು ಜಮಾಯಿಸಿತ್ತು.ಕೆಲ ಅಭಿಮಾನಿಗಳು ನೆಚ್ಚಿನ ನಾಯಕನನ್ನು ಮೊಬೈಲ್ಗಳಲ್ಲಿ ಸೆರೆ ಹಿಡಿಯುತ್ತಿದ್ದರೇ, ಇನ್ನು ಕೆಲವರು ಕೈ ಕುಲುಕಲು ಮುಗಿ ಬೀಳುತ್ತಿದ್ದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಕೆಲಕಾಲ ಹರಸಾಹಸ ಪಡಬೇಕಾಯಿತು.
‘ಹುಡುಗರು’ ಚಲನಚಿತ್ರ ಚಿತ್ರೀಕರಣ ಐತಿಹಾಸಿಕ ಕೋಟೆಯಲ್ಲಿ ಹಾಗೂ ತಾಲ್ಲೂಕಿನ ಮದಕರಿಪುರದ ಕೆಲ ಸ್ಥಳಗಳಲ್ಲಿ ಎರಡು ದಿನಗಳ ಕಾಲ ನಡೆಯಲಿದೆ. ಈ ಚಿತ್ರಕ್ಕೆ ಮಾದೇಶ್ ಅವರ ನಿರ್ದೇಶನವಿದ್ದು, ತಮಿಳಿನ ‘ನಾಡೋಡಿಗಲ್’ ಹಾಗೂ ತೆಲುಗಿನ ‘ಶಂಭೂ ಶಿವ ಶಂಭೂ’ ಚಿತ್ರದ ರಿಮೇಕ್ ಕನ್ನಡದ ‘ಹುಡುಗರು’. ಚಿತ್ರದಲ್ಲಿ ಬಹು ನಾಯಕರಿದ್ದು, ಪುನೀತ್ ರಾಜ್ಕುಮಾರ್ ಪ್ರಮುಖ ನಾಯಕನ ಪಾತ್ರ ವಹಿಸುತ್ತಿದ್ದಾರೆ. ಇತರೆ ನಾಯಕರಾದ ಶ್ರೀನಗರ ಕಿಟ್ಟಿ, ಲೂಸ್ಮಾದಾ ಖ್ಯಾತಿಯ ಯೋಗೀಶ್, ನಾಯಕನಟಿ ರಾಧಿಕಾ ಪಂಡಿತ್, ತಮಿಳಿನ ಅಭಿನಯಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಶಿವರಾಜ್ಕುಮಾರ್ ಅವರ ಮೈಲಾರಿ ಚಿತ್ರದ ಧ್ವನಿಸುರಳಿ ಬಿಡುಗಡೆ ಸಮಾರಂಭದಲ್ಲಿ ಚಿತ್ರದುರ್ಗಕ್ಕೆ ಪುನೀತ್ ರಾಜ್ಕುಮಾರ್ ಆಗಮಿಸಿದ್ದರು.