ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈತಿಕತೆಯಿಂದ ಅಪರಾಧ ತಡೆ ಸಾಧ್ಯ: ನ್ಯಾ. ಮಳೀಮಠ

Last Updated 9 ಡಿಸೆಂಬರ್ 2013, 5:47 IST
ಅಕ್ಷರ ಗಾತ್ರ

ಬೆಳಗಾವಿ: ‘ಕೇವಲ ಕಾನೂನುಗಳನ್ನು ಜಾರಿಗೆ ತಂದರೆ ಅಪರಾಧ ತಡೆಯಲು ಸಾಧ್ಯವಿಲ್ಲ. ಬದಲಾಗಿ ನೈತಿಕತೆಯಿಂದ ಮಾತ್ರ ಅಪರಾಧ ತಡೆಯಲು ಸಾಧ್ಯ’ ಎಂದು ಕರ್ನಾಟಕ ಕಾನೂನು ಪ್ರಾಧಿಕಾರದ ಅಧ್ಯಕ್ಷ ನ್ಯಾಯಮೂರ್ತಿ ವಿ.ಎಸ್. ಮಳೀಮಠ ಹೇಳಿದರು.

ಇಲ್ಲಿನ ಹಿಂದವಾಡಿಯ ಐಎಂಇಆರ್‌ ಸಭಾಗೃಹದಲ್ಲಿ ನಡೆದ ನಾಡೋಜ ಪ್ರತಿಷ್ಠಾನದ 11ನೇ ಸಮ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

‘ದೆಹಲಿಯ ನಿರ್ಭಯಾ ಪ್ರಕರಣದ ನಂತರ ಲಗುಬಗೆಯಿಂದ ಸರ್ಕಾರವು ಕಠಿಣ ಕಾನೂನುಗಳನ್ನು ಜಾರಿಗೆ ತಂದರೂ ಪ್ರಯೋಜನವಾಗಿಲ್ಲ. ಮಹಿಳೆ ಯರ ಮೇಲಿನ ದೌರ್ಜನ್ಯ, ಅತ್ಯಾಚಾರ ದಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇವೆ. ಆರೋಪಿಗಳಿಗೆ ಶಿಕ್ಷೆ ವಿಧಿಸಲು ಕಾನೂನುಗಳು ಬೇಕು. ಆದರೆ, ಅಪರಾಧಗಳ ತಡೆ ನೈತಿಕತೆ ಯಿಂದ ಮಾತ್ರ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಗಡಿ ಸಮಸ್ಯೆ ಎಂದರೆ ಬೆಳಗಾವಿ ಎನ್ನುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಮಹಾಜನ ವರದಿಯಲ್ಲಿ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದರೂ, ಮಹಾರಾಷ್ಟ್ರ ರಾಜ್ಯವು ಬೆಳಗಾವಿ ಯನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳಲು ಹೋರಾಡುತ್ತಿದೆ. ಅದೇ ಮಹಾಜನ ವರದಿಯಲ್ಲಿ ಕಾಸರಗೋಡು ಕರ್ನಾಟಕದ ಪಾಲಾಗಿದ್ದರೂ, ನಮ್ಮ ಸರ್ಕಾರವು ಕಾಸರಗೋಡಿಗಾಗಿ ಎಂದೂ ಧ್ವನಿ ಎತ್ತಿಲ್ಲ. ಇದು ಕಾಸರಗೋಡಿನ ಕನ್ನಡಿಗರಿಗೆ ಮಾಡಿರುವ ಅನ್ಯಾಯ ವಾಗಿದೆ’ ಎಂದು ಮಳೀಮಠ ವಿಷಾದಿಸಿದರು.

ಪ್ರಶಸ್ತಿ ಪ್ರದಾನ ಮಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್‌ರಾಜ್‌ ಸಚಿವ ಎಚ್.ಕೆ. ಪಾಟೀಲ, ‘ರಾಜ್ಯದ ನೆಲ, -ಜಲ, ವಿವಾದಗಳ ಕುರಿತು ಸಂಘಟನೆಗಳು ಹಾಗೂ ಮಾಧ್ಯಮಗಳು ವಿಚಾರ ಸಂಕಿರಣ ಮತ್ತು ಪುಸ್ತಕ ಪ್ರಕಟಣೆಗಳ ಮೂಲಕ ಜನಾಭಿಪ್ರಾಯ ರೂಪಿಸಬೇಕು. ಆಗ ಸರ್ಕಾರದ ಮೇಲೆ ಒತ್ತಡ ಹೇರಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘2010ರಲ್ಲಿ ಬೃಜೇಶ ಕುಮಾರ ಅವರ ಕೃಷ್ಣಾ ಐತೀರ್ಪಿನ ವಿರುದ್ಧ 12 ಆಕ್ಷೇಪಗಳನ್ನು ಸಲ್ಲಿಸಿದ ಪರಿಣಾಮ ವಾಗಿ ಕರ್ನಾಟಕಕ್ಕೆ ಹೆಚ್ಚಿನ ನೀರು ದೊರೆತಿದೆ. ನಾವು ಕೇಳಿದ ಕೆಲವೊಂದು ಸ್ಪಷ್ಟನೆಗಳಿಗೆ ಈಗ ಉತ್ತರ ದೊರಕಿದೆ. ಮುಂದಿನ ನಡೆಯ ಬಗ್ಗೆ ರಾಜ್ಯ ಸರ್ಕಾರವು ಸಂಪೂರ್ಣವಾಗಿ ತೆರೆದ ಮನಸ್ಸು ಹೊಂದಿದ್ದು, ಸಂಘಟನೆಗಳು ಹಾಗೂ ಮಾಧ್ಯಮಗಳು ಜನಾಭಿ ಪ್ರಾಯ ರೂಪಿಸಿದರೆ ಸೂಕ್ತ’ ಎಂದರು.

ಈ ಸಂದರ್ಭದಲ್ಲಿ ಗಡಿ ಸಲಹಾ ಸಮಿತಿ ಸದಸ್ಯ ಕೆ.ಎನ್. ಬೆಂಗೇರಿ ಅವರಿಗೆ ಅರವಿಂದ ಸಮ್ಮಾನ್‌, ಲೇಖಕಿ ಡಾ. ಲತಾ ಗುತ್ತಿ ಅವರಿಗೆ ಕಾತ್ಯಾಯಿನಿ ಸಮ್ಮಾನ್‌, ಗುರುಸಿದ್ಧ ಸ್ವಾಮೀಜಿಯ ವರಿಗೆ ಸೀತಾಬಾಯಿ ಜೋಶಿ ಸಮ್ಮಾನ್‌, ನಿವೃತ್ತ ಪ್ರಾಚಾರ್ಯ ಡಾ. ಬಸವರಾಜ ಜಗಜಂಪಿ ಅವರಿಗೆ ವೆಂ.ಕೃ. ಅಧ್ಯಾಪಕ ಸಮ್ಮಾನ್‌ ಹಾಗೂ ನಿವೃತ್ತ ಶಿಕ್ಷಕ ಶಂಕರ ಮ್ಯಾಗೋಟಿ ಅವರಿಗೆ ಚಿದಂಬರ ಮಾಸ್ತರ್ ಸಮ್ಮಾನ್‌ ನೀಡಿ ಗೌರವಿಸಲಾಯಿತು.

ನಾಡೋಜ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಎಲ್.ತುಕ್ಕಾರ, ಕಾರ್ಯಾ ಧ್ಯಕ್ಷ ರಾಘವೇಂದ್ರ ಜೋಶಿ, ಕಾರ್ಯ ದರ್ಶಿ ಡಾ. ಶ್ರೀನಿವಾಸ ಕುಲಕರ್ಣಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT