ನವದೆಹಲಿ: ಕಾನೂನು ತರಬೇತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ನಿವೃತ್ತ ನ್ಯಾಯಮೂರ್ತಿ ಎ.ಕೆ.ಗಂಗೂಲಿ ಅವರನ್ನು ಪಶ್ಚಿಮಬಂಗಾಳ ಮಾನವ ಹಕ್ಕು ಆಯೋಗದ ಅಧ್ಯಕ್ಷ ಸ್ಥಾನದಿಂದ ವಜಾ ಮಾಡುವ ಬಗ್ಗೆ ಕಾನೂನು ಸಚಿವಾಲಯವು ಅಟಾರ್ನಿ ಜನರಲ್ ಜಿ.ಇ.ವಾಹನ್ವತಿ ಅಭಿಪ್ರಾಯ ಕೇಳಿದೆ.
ಪ್ರಕರಣದ ತನಿಖೆ ವಿಷಯವಾಗಿ ರಾಷ್ಟ್ರಪತಿ, ಸುಪ್ರೀಂಕೋರ್ಟ್ಗೆ ಪ್ರಸ್ತಾವನೆ ಕಳಿಸುವ ಕುರಿತು ಸಚಿವಾಲಯವು ಅಂತಿಮ ನಿರ್ಧಾರ ತೆಗೆದುಕೊಳ್ಳಲು ವಾಹನ್ವತಿ ಅನಿಸಿಕೆ ಮಹತ್ವದ್ದಾಗಿದೆ. ಗಂಗೂಲಿ ಅವರನ್ನು ವಜಾ ಮಾಡುವಂತೆ ಕೋರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದರು. ಈ ಪತ್ರವನ್ನು ರಾಷ್ಟ್ರಪತಿ ಪ್ರಣವ್್ ಮುಖರ್ಜಿ, ಗೃಹ ಸಚಿವಾಲಯದ ಅವಗಾಹನೆಗೆ ಕಳಿಸಿದ್ದರು.
‘ಕಾನೂನು ಸಚಿವಾಲಯದ ಅನಿಸಿಕೆ ಪಡೆದುಕೊಂಡು ಮುಂದಿನ ಹೆಜ್ಜೆ ಇಡುತ್ತೇವೆ’ ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಸುದ್ದಿಗಾರರಿಗೆ ತಿಳಿಸಿದರು. ಗಂಗೂಲಿ ಅವರನ್ನು ವಜಾ ಮಾಡುವಂತೆ ಕೋರಿ ಹೆಚ್ಚುವರಿ ಸಾಲಿಸಿಟರ್್ ಜನರಲ್ ಇಂದಿರಾ ಜೈಸಿಂಗ್ ಕೂಡ ಪ್ರಧಾನಿಗೆ ಪತ್ರ ಬರೆದಿದ್ದಾರೆ.
ನ್ಯಾ. ಗಂಗೂಲಿ ಪರ ಸೋಮನಾಥ ಹೇಳಿಕೆ: ಗಂಗೂಲಿ ಅವರನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿರುವ ಲೋಕಸಭೆ ಮಾಜಿ ಅಧ್ಯಕ್ಷ ಸೋಮನಾಥ ಚಟರ್ಜಿ, ಗಂಗೂಲಿ ವಿರುದ್ಧದ ಆರೋಪದ ಮರು ತನಖೆಗೆ ಕೇಂದ್ರವು ಸುಪ್ರೀಂಕೋರ್ಟ್ಗೆ ಮನವಿ ಮಾಡಿಕೊಂಡಲ್ಲಿ ಅದು ‘ನ್ಯಾಯದ ವಿಡಂಬನೆ’ ಎಂದು ಹೇಳಿದ್ದಾರೆ.
‘ಈಗಾಗಲೇ ಪ್ರಕರಣವನ್ನು ಸುಪ್ರೀಂಕೋರ್ಟ್ ತನಿಖೆ ಮಾಡಿದೆ. ಹೀಗಿರುವಾಗ ಸುಪ್ರೀಂಕೋರ್ಟ್ನಿಂದಲೇ ಮರು ತನಿಖೆ ಹೇಗೆ ಸಾಧ್ಯ’ ಎಂದು ಚಟರ್ಜಿ ಪ್ರಶ್ನಿಸಿದ್ದಾರೆ. ತನಿಖೆ ವಿಷಯವಾಗಿ ರಾಷ್ಟ್ರಪತಿ, ಸುಪ್ರೀಂಕೋರ್ಟ್ಗೆ ಪ್ರಸ್ತಾವನೆ ಕಳಿಸುವ ಕುರಿತು ಗೃಹ ಸಚಿವಾಲಯವು ಕಾನೂನು ಸಚಿವಾಲಯದ ಅನಿಸಿಕೆ ಕೇಳಿದ್ದಕ್ಕೆ ಚಟರ್ಜಿ ಈ ರೀತಿ ಪ್ರತಿಕ್ರಿ-ಯಿಸಿದ್ದಾರೆ.
‘ಒಂದು ವೇಳೆ ಗಂಗೂಲಿ ಸುಳ್ಳು ಹೇಳಿದ್ದರೆ ಅವರು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಈ ಪ್ರಕರಣದಲ್ಲಿ ಏಕಕಾಲದಲ್ಲಿ ಹಲವಾರು ಘಟನೆಗಳು ನಡೆದಿವೆ. ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗಂಗೂಲಿ ರಾಜೀನಾಮೆಗೆ ಯಾಕೆ ಪಟ್ಟು ಹಿಡಿದಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು.’
‘ಗಂಗೂಲಿ ಅಪರಾಧಿ ಎಂದು ಸಾಬೀತಾದರೆ, ಮಾನವ ಹಕ್ಕುಗಳ ಕಾಯ್ದೆ ಸೆಕ್ಷನ್ 23ರ ಪ್ರಕಾರ ಅವರನ್ನು ಸೇವೆಯಿಂದ ವಜಾ ಮಾಡುವ ಅಧಿಕಾರ ರಾಷ್ಟ್ರಪತಿಗೆ ಇದೆ. ತಪ್ಪು ಮಾಡದೇ ಇದ್ದಲ್ಲಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಅವರು ರಾಜೀನಾಮೆ ನೀಡಿದರೆ ತಪ್ಪನ್ನು ಒಪ್ಪಿಕೊಂಡಂತಾಗುತ್ತದೆ’ ಎಂದು ಚಟರ್ಜಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.