ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಆಸ್ತಿಯ ದೃಢೀಕರಣಕ್ಕೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಅವರ ತಂಡ ಕರ್ನಾಟಕದಿಂದ ಚೆನ್ನೈಗೆ ಭೇಟಿ ನೀಡಿದೆ.
ದೃಢೀಕರಣಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಕೊಠಡಿಯಲ್ಲಿ ಇರಿಸಲಾಗಿದ್ದ ಬೆಲೆಬಾಳುವ ವಸ್ತುಗಳನ್ನು ಚೆನ್ನೈ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ನ್ಯಾಯಾಲಯಕ್ಕೆ ಒಯ್ಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ವಿಶೇಷ ನ್ಯಾಯಾಧೀಶ ಜಾನ್ ಮೈಕೆಲ್ ಡಿ’ಕುನ್ಹಾ ಮಂಗಳವಾರ ಚೆನ್ನೈನ ನ್ಯಾಯಾಲಯಕ್ಕೆ ಭೇಟಿ ನೀಡಿ ದಾಖಲೆಗಳು ಮತ್ತು ಅಮೂಲ್ಯ ವಸ್ತುಗಳ ದೃಢೀಕರಣ ನಡೆಸಿದರು.
ಈ ವಸ್ತುಗಳನ್ನು ಕಣ್ಣಾರೆ ನೋಡಿ ಅಂದಾಜು ನಡೆಸಬೇಕು ಮತ್ತು ಅವುಗಳನ್ನು ಬೆಂಗಳೂರಿಗೆ ವರ್ಗಾಯಿಸಬೇಕು ಎಂದು ಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ.ಅನ್ಬಳಗನ್ ಸಲ್ಲಿಸಿದ ದೂರಿನ ಮೇರೆಗೆ ಈ ಅಂದಾಜು ನಡೆಸಲಾಗಿದೆ.
ಜಯಲಲಿತಾ ಅವರ ನಿವಾಸದಿಂದ 1997ರಲ್ಲಿ ವಶಪಡಿಸಿಕೊಳ್ಳಲಾದ 800 ಕಿಲೋ ಬೆಳ್ಳಿ, 28 ಕಿಲೋ ಬಂಗಾರ, 750 ಜೊತೆ ಪಾದರಕ್ಷೆಗಳು,10,500 ಸೀರೆಗಳು ಮತ್ತು 91 ವಾಚುಗಳನ್ನು ನ್ಯಾಯಾಲಯದ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಅನ್ಬಳಗನ್ ದೂರಿನಲ್ಲಿ ವಿನಂತಿಸಿದ್ದಾರೆ.
ತಮಿಳುನಾಡಿನ ಜಾಗೃತ ನಿರ್ದೇಶನಾಲಯ ಮತ್ತು ಭ್ರಷ್ಟಾಚಾರ ತಡೆ ಘಟಕ ಈ ಸೊತ್ತುಗಳನ್ನು ಜಯಲಲಿತಾ ನಿವಾಸದಿಂದ ವಶಪಡಿಸಿಕೊಂಡಿತ್ತು.