ಬೀದರ್: ಆಂತರಿಕ ಸಮಸ್ಯೆಗಳನ್ನು ಪಕ್ಷದ ವೇದಿಕೆಯಲ್ಲೇ ಬಗೆಹರಿಸಿಕೊಳ್ಳುವಂತೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಸುಭಾಷ ಕಲ್ಲೂರ ಕಾರ್ಯಕರ್ತರಿಗೆ ಸಲಹೆ ಮಾಡಿದರು.ನಗರದಲ್ಲಿ ಸೋಮವಾರ ನಡೆದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.ಕುಂದುಕೊರತೆಗಳಿದ್ದರೆ ತಮಗೆ ತಿಳಿಸಬೇಕು. ಮಾಧ್ಯಮಗಳ ಮುಂದೆ ಹೋಗಬಾರದು ಎಂದು ಕಿವಿಮಾತು ಹೇಳಿದರು. ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಮತ್ತಷ್ಟು ಬಲಪಡಿಸಲು ಶ್ರಮಿಸಬೇಕು ಎಂದರು.
ಶಾಸಕ ಬಸವರಾಜ ಪಾಟೀಲ್ ಅಟ್ಟೂರ ಮಾತನಾಡಿ, ಬಿಜೆಪಿಯಲ್ಲಿ ಮಾತ್ರ ಸಂಘಟನೆಗೆ ಮಹತ್ವ ಇದೆ. ಪಕ್ಷದಿಂದಲೇ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯವಿದೆ ಎಂದು ತಿಳಿಸಿದರು. ಡಾ. ಬಾಬುಜಗಜೀವನರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜೇಂದ್ರ ವರ್ಮಾ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಿರ್ನಾಮ ಆಗಿವೆ. ಜನಪರ ಆಡಳಿತ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಾಥರಾವ ಮಲ್ಕಾಪುರೆ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಬುವಾಲಿ, ಬಿಡಿಎ ಅಧ್ಯಕ್ಷ ಬಾಬುರಾವ ಮದಕಟ್ಟಿ, ಮುಖಂಡ ಸಂಜಯ ಖೇಣಿ, ಗುಲ್ಬರ್ಗ-ಬೀದರ್ ಹಾಲು ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ ಉಪಸ್ಥಿತರಿದ್ದರು.ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ ಕುದರೆ ಸ್ವಾಗತಿಸಿದರು. ಜಿಲ್ಲಾ ವಕ್ತಾರ ಬಸವರಾಜ ಪವಾರ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಶೆಟಕಾರ ವಂದಿಸಿದರು.
ಕಾಶ್ಮೀರದಲ್ಲಿ ನಡೆಯಲಿರುವ ಏಕತಾ ಯಾತ್ರೆ, ರಾಷ್ಟ್ರೀಯ ಸುರಕ್ಷಾ ಸಪ್ತಾಹ, ಅಜೀವ ಸಹಯೋಗಿ ನಿಧಿ ಮತ್ತಿತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.