ಯಲ್ಲಾಪುರ: “ಪತ್ರಿಕೋದ್ಯಮದ ವೈವಿಧ್ಯವನ್ನು ರಕ್ಷಿಸಲು ಜಾಗತಿಕ ಪ್ರಭಾವವನ್ನು ಎದುರಿಸಿ ನಿಂತು, ಅದನ್ನು ಉಳಿಸಿಕೊಂಡು ನೈತಿಕತೆ ಮತ್ತು ಬದ್ಧತೆಯಿಂದ ಪ್ರಜಾರಂಗಕ್ಕೆ ಕೊಡುಗೆ ನೀಡುವ ಕಾರ್ಯ ಪತ್ರಿಕೆಗಳಿಂದ ಆಗಬೇಕು” ಎಂದು ಲೇಖಕ, ವಿಮರ್ಶಕ, ಇಂಟೆಲ್ ಕಂಪೆನಿಯ ಸಂವಹನ ವಿಭಾಗದ ದಕ್ಷಿಣ ಏಷ್ಯಾದ ಮುಖ್ಯಸ್ಥ ಎಸ್. ಆರ್. ವಿಜಯಶಂಕರ ಹೇಳಿದರು.
ಮಂಚಿಕೇರಿಯಲ್ಲಿ ಸೋಮವಾರ ನಡೆದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ತಿಮ್ಮಪ್ಪ ಭಟ್ಟ ಎಣ್ಣೆಸರ ಅವರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪೂರ್ವಾಗ್ರಹ ಪೀಡಿತರಾಗಿ ವರ್ತಿಸುವುದು ಪತ್ರಿಕೆಯ ಬೆಳವಣಿಗೆಗೆ ಅಪಾಯಕಾರಿ. ಯಾರಿಗೂ ಗೊತ್ತಾಗದ ರೀತಿಯಲ್ಲಿ ಯಾವುದೇ ಹಿಡನ್ ಅಜಂಡಾ ಇಲ್ಲದೇ ಪತ್ರಿಕೆಯ ಮೂಲ ಧರ್ಮವನ್ನು ಪಾಲಿಸಿಕೊಂಡು ಕಾರ್ಯಸಾಧನೆ ಮಾಡಿದ ತಿಮ್ಮಪ್ಪ ಭಟ್ಟ ಅಭಿನಂದನಾರ್ಹರು ಎಂದರು.
ಹಿರಿಯ ಸಾಹಿತಿ ನಾ.ಸು. ಭರತನಹಳ್ಳಿ ಅಭಿನಂದನಾ ಮಾತನಾಡಿದರು.ಸನ್ಮಾನ ಸ್ವೀಕರಿಸಿದ ತಿಮ್ಮಪ್ಪ ಭಟ್ಟ, ‘ಏಕಚಿತ್ತತೆ, ಶ್ರದ್ಧೆ, ಈ ಪ್ರಶಸ್ತಿಗೆ ಕಾರಣವಾಗಿದೆ ಎಂದರು.ಶಾಂತಾರಾಮ ಹೆಗಡೆ ಶಿಗೇಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸೀತಾರಾಮ ಹೆಗಡೆ ಹೀಪನಳ್ಳಿ, ಎಸ್.ಜಿ.ಹೆಗಡೆ ಮತ್ತು ಆರ್.ಜಿ. ಹೆಗಡೆ ಬೆದೆಹಕ್ಲ್, ಪಂ. ಗಣಪತಿ ಭಟ್ಟ ಹಾಸಣಗಿ. ಎನ್.ಎಸ್.ಹೆಗಡೆ ಕುಂದರಗಿ, ಶಾಂತಾರಾಮ ಭಟ್ಟ, ನಾಗೇಂದ್ರ ಭಟ್ಟ ಭರಣಿ , ಆರ್. ಎಲ್. ಭಟ್ಟ, ಪ್ರಮೋದ ಹೆಗಡೆ, ಆರ್.ಎನ್.ಹೆಗಡೆ ಗೋರ್ಸಗದ್ದೆ, ರಾಘವ ಭಟ್ಟ ಉಪಸ್ಥಿತರಿದ್ದರು.ಕಾರ್ಯಕ್ರಮದ ಮೊದಲು ನಡೆದ ಸೀಮಾ ಹೆಗಡೆಯ ಸಂತೂರ್ ವಾದನ ಮತ್ತು ನಂತರ ನಡೆದ ಪ್ರವೀಣ ಗೋಡಖಿಂಡಿ ಬಾನ್ಸುರಿ ವಾದನ ಪ್ರೇಕ್ಷಕರ ಮನ ಸೂರೆಗೊಂಡಿತು.