ನವದೆಹಲಿ (ಐಎಎನ್ ಎಸ್): ಕೇರಳದ ಶ್ರೀ ಪದ್ಮನಾಭ ಸ್ವಾಮಿ ದೇವಾಲಯದ ನೆಲಮಾಳಿಗೆಗಳಲ್ಲಿ ಪತ್ತೆಯಾದ ಭಾರಿ ಪ್ರಮಾಣದ ಅತ್ಯಮೂಲ್ಯ ಚಿನ್ನಾಭರಣಗಳ ಭದ್ರತೆ ಮತ್ತು ಸುರಕ್ಷಿತ ಸಂರಕ್ಷಣೆಗೆ ಕ್ರಮಗಳನ್ನು ಕೈಗೊಂಡ ಬಳಿಕವಷ್ಟೇ ~ಬಿ~ ನೆಲಮಾಳಿಗೆ ತೆರೆಯುವ ವಿಚಾರವನ್ನು ಪರಿಶೀಲಿಸಲಾಗುವುದು ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.
ನ್ಯಾಯಮೂರ್ತಿ ಆರ್. ವಿ. ರವೀಂದ್ರನ್ ಮತ್ತು ನ್ಯಾಯಮೂರ್ತಿ ಎ.ಎಕ. ಪಟ್ನಾಯಿಕ್ ಅವರನ್ನು ಒಳಗೊಂಡ ಪೀಠವು ತಜ್ಞರ ಸಮಿತಿಯು ಇತರ ನೆಲ ಮಾಳಿಗೆಗಳಲ್ಲಿ ಪತ್ತೆಯಾದ ಅಮೂಲ್ಯ ವಸ್ತುಗಳ ಸಂರಕ್ಷಣೆಗೆ ಮಾಡಿದ ಶಿಫಾರಸುಗಳ ಬಗೆಗಿನ ತನ್ನ ಆದೇಶವನ್ನು ಕಾಯ್ದಿರಿಸುತ್ತಾ ಈ ವಿಚಾರವನ್ನು ತಿಳಿಸಿತು.
ನ್ಯಾಯಾಲಯವು ತನ್ನ ತೀರ್ಮಾನವನ್ನು ಬುಧವಾರ ಪ್ರಕಟಿಸಲಿದೆ. ಸಂಪ್ರದಾಯಗಳು ಮತ್ತು ಭಕ್ತರ ನಂಬಿಕೆಗಳನ್ನು ನ್ಯಾಯಾಲಯವು ಎತ್ತಿ ಹಿಡಿಯುವುದು. ಆದರೆ ದೇವಾಲಯದ ಆಸ್ತಿ ಸಂರಕ್ಷಣೆಗೆ ಭದ್ರತೆ ಒದಗಿಸುವ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಅವರಿಗೆ ಅವಕಾಶ ನೀಡದು ಎಂದು ನ್ಯಾಯಮೂರ್ತಿ ರವೀಂದ್ರನ್ ಹೇಳಿದರು.
ಸಂಪ್ರದಾಯ, ನಂಬಿಕೆ ಮತ್ತು ದೇವಾಲಯದ ನಿಧಿಗೆ ಭದ್ರತೆ ಒದಗಿಸುವುದಕ್ಕೆ ಸಂಬಂಧಿಸಿದಂತೆ ಎಲ್ಲೋ ಒಂದು ಕಡೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅಗತ್ಯ ಇದೆ ಎಂದೂ ನ್ಯಾಯಾಲಯ ಹೇಳಿತು.
ಈವರೆಗೆ ತೆರೆಯಲಾಗಿರುವ ದೇವಾಲಯದ ಐದು ನೆಲಮಾಳಿಗೆಗಳಲ್ಲಿ ಪತ್ತೆಯಾದ ವಜ್ರಾಭರಣ, ಚಿನ್ನದ ವಿಗ್ರಹಗಳು ಮತ್ತು ನಾಣ್ಯಗಳ ಮೌಲ್ಯ ಒಂದು ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಎಂದು ಅನಧಿಕೃತವಾಗಿ ಅಂದಾಜು ಮಾಡಲಾಗಿದೆ.