ಹೊಸಕೋಟೆ: `ಕುಲಕಸಬು ನಡೆಸಲಾಗದೆ ಸಂಕಷ್ಟದಲ್ಲಿರುವ ಮಡಿವಾಳ ಜನಾಂಗದವರಿಗೆ ಸಾಮಾಜಿಕ ಭದ್ರತೆ, ನ್ಯಾಯ, ರಕ್ಷಣೆ ನೀಡುವ ನಿಟ್ಟಿನಲ್ಲಿ ಆ ಸಮುದಾಯವನ್ನು ಪರಿಶಿಷ್ಟ ಜಾತಿ ಗುಂಪಿಗೆ ಸೇರಿಸಬೇಕು' ಎಂದು ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಒತ್ತಾಯಿಸಿದರು.
ಹೊಸಕೋಟೆ ತಾಲ್ಲೂಕು ಮಾಚಿದೇವರ ಮಡಿವಾಳ ಸಂಘವು ಪಟ್ಟಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮಾಚಿದೇವರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಶಂಕರಪ್ಪ ಮಾತನಾಡಿ, `ರಾಜ್ಯದಲ್ಲಿ 20 ಲಕ್ಷ ಮಡಿವಾಳರಿದ್ದು ಅವರು ಸ್ವಾಭಿಮಾನಿಗಳಾಗಿ ಸಂಘಟಿತರಾಗಬೇಕು' ಎಂದರು.
ಶಿವಯೋಗಾನಂದಪುರ ಸ್ವಾಮೀಜಿ ಮಾತನಾಡಿ `ಸಮಾಜದಲ್ಲಿ ಪರಿವರ್ತನೆ ತರಲು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು' ಎಂದು ಸಮಾಜ ಬಾಂಧವರಿಗೆ ಸಲಹೆ ನೀಡಿದರು.
ಐಪಿಎಸ್ ಅಧಿಕಾರಿ ಎಸ್.ಪಿ.ವೆಂಕಟೇಶ್, ಸಮುದಾಯದ ಮುಖಂಡ ಜಿ.ಡಿ.ಗೋಪಾಲ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆ, ಗುರುಮಂದಿರ, ದೋಭಿಘಾಟ್ ಅನ್ನು ಉದ್ಘಾಟಿಸಲಾಯಿತು.