ಯಲ್ಲಾಪುರ: ‘ದೇಶ ಸುತ್ತು, ಕೋಶ ಓದು’ ಎಂಬುದು ಗಾದೆ ಮಾತು. ಜ್ಞಾನವರ್ಧನೆಗಾಗಿ ಮಾತ್ರವಲ್ಲದೇ, ಪರಿಸರ ಜಾಗೃತಿಗಾಗಿ ಮುಂಬೈನ ಠಾಣೆಯ ವೈಭವ್ ದೇಸಾಯಿ ಸಂದೇಶಗಳನ್ನು ಸಾರುತ್ತ, ಸೈಕಲ್ ಮೇಲೆ ದೇಶ ಸುತ್ತುತ್ತಿದ್ದಾರೆ.
ಹಸಿರು ಹಸನಾಗಿರಬೇಕೆಂಬ ಹಂಬಲದಿಂದ ‘ಗ್ರೀನ್ ಸೈಕಲ್, ಗ್ರೀನ್ ಅರ್ಥ’ ಎಂಬ ಸಂದೇಶವನ್ನು ಸಾರುತ್ತಾ ಜಗತ್ತನ್ನೇ ಸುತ್ತಬೇಕೆನ್ನುವುದು ವೈಭವ್ ಬಯಕೆ. ಮುಂಬೈನ ಗೋದ್ರೆಜ್ ಇನ್ಫೋಟೆಕ್ ಕಂಪನಿಯ ಉದ್ಯೋಗಿಯಾಗಿರುವ 24 ವರ್ಷದ ವೈಭವಪ್ರಸಾದ ದೇಸಾಯಿ ಕಳೆದ ಡಿಸಂಬರ್ 20ರಿಂದ ಹಸಿರು ಜಾಗೃತಿಗಾಗಿ ತಿರುಗಾಟ ಆರಂಭಿಸಿದ್ದಾರೆ. ಮಹಾರಾಷ್ಟ್ರ, ಗೋವಾ ರಾಜ್ಯದಾದ್ಯಂತ ಸಂಚರಿಸಿ, ಈಗ ಕರ್ನಾಟಕಕ್ಕೆ ಕಾಲಿಟ್ಟಿದ್ದಾರೆ. ಪ್ರಯಾಣದ ದಾರಿಯಲ್ಲಿರುವ ಶಾಲೆ ಕಾಲೇಜುಗಳಲ್ಲಿ ಪರಿಸರದ ಕುರಿತು ಮಕ್ಕಳಿಗೆ ಅರಿವು ಮೂಡಿಸುವರು.
ಪ್ಲಾಸ್ಟಿಕ್ರಹಿತ ಭಾರತದ ಕುರಿತು ಸಂದೇಶ ಸಾರುವರು. ಅಲ್ಲದೆ ಆ ಊರುಗಳಲ್ಲಿರುವ ಪ್ರೇಕ್ಷಣೀಯ ಸ್ಥಳ, ಧಾರ್ಮಿಕ ಕೇಂದ್ರಗಳೀಗೂ ಭೇಟಿ ನೀಡುವರು.ಕಳೆದ 70 ದಿನಗಳ ಪ್ರವಾಸದಲ್ಲಿ ಸುಮಾರು 2200 ಕಿ.ಮಿ. ದೂರವನ್ನು ಕ್ರಮಿಸಿರುವ ವೃಭವ್, ಕಾರವಾರದಿಂದ ಉಳವಿ ಮಾರ್ಗವಾಗಿ ಯಲ್ಲಾಪುರ ತಲುಪಿದ್ದರು. ಇನ್ನೂ ಎರಡು ವರ್ಷ ದೇಶ ಸುತ್ತುವುದಾಗಿ ಹೇಳುವರು. ಪ್ರಾಯೋಜಕತ್ವ ಸಿಕ್ಕರೆ ಜಾಗೃತಿ ಕಾರ್ಯಕ್ರಮ ಇನ್ನಷ್ಟು ವಿಸ್ತರಣೆ ಆಗಲಿದೆ ಎನ್ನುವರು.
ಚಿಕ್ಕಂದಿನಿಂದಲೇ ಜಗತ್ತನ್ನು ಸುತ್ತಬೇಕೆಂಬ ಮಹದಾಸೆ ಹೊತ್ತಿದ್ದ ವೈಭವ್ಗೆ ಹಣಕಾಸಿನ ತೊಂದರೆ ಇತ್ತು. ಹೀಗಾಗಿ ಅವರು ಆಯ್ದುಕೊಂಡಿದ್ದು ಸೈಕಲ್ ಯಾತ್ರೆ. 2008ರಲ್ಲಿ ಮುಂಬೈನಿಂದ ಲಡಾಕ್ವರೆಗೆ 3000 ಕಿ.ಮೀ. ಪ್ರವಾಸವನ್ನು 24 ದಿನಗಳಲ್ಲಿ ಮುಗಿಸಿದ್ದರು. 2010ರಲ್ಲಿ ಮುಂಬೈನಿಂದ ಕನ್ಯಾಕುಮಾರಿ ವರೆಗೆ 2000 ಕಿ.ಮೀ. ದೂರವನ್ನು 17 ದಿನಗಳಲ್ಲಿ ಪೂರೈಸಿ ‘ಇಂಧನ ಉಳಿಸಿ ಜಗತ್ತನ್ನು ರಕ್ಷಿಸಿ’ ಎಂಬ ಸಂದೇಶ ಸಾರಿದ್ದರು. ಈ ಎಲ್ಲ ಪ್ರವಾಸಗಳಿಗೆ ಗೋದ್ರೆಜ್ ಕಂಪನಿ ರಜೆ ನೀಡಿ ಸಹಕಾರ ನೀಡಿತ್ತು.
ಮುಂದಿನ ದಿನಗಳಲ್ಲಿ ಮಧ್ಯ ಏಷ್ಯಾ, ಯುರೋಪ್, ಆಫ್ರಿಕಾ ದೇಶವನ್ನು ಒಳಗೊಂಡ 50 ದೇಶಗಳ 80 ಸಾವಿರ ಕಿ.ಮೀ. ದೂರವನ್ನು ತಮ್ಮ ಸೈಕಲ್ ತುಳಿಯುವ ಯೋಚನೆ ಹೊಂದಿದ್ದಾರೆ.
ನಾಗರಾಜ ಮದ್ಗುಣಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.