ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ಪ್ರತಿಭಟನೆ

Last Updated 7 ಸೆಪ್ಟೆಂಬರ್ 2013, 6:36 IST
ಅಕ್ಷರ ಗಾತ್ರ

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಪದವಿ ತರಗತಿಗಳ ಪರೀಕ್ಷಾ ಶುಲ್ಕ ಏರಿಕೆ ಮಾಡಿರುವದನ್ನು ಖಂಡಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯುತ್ ಆರ್ಗನೈಜೇಶನ್ ಮತ್ತು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಜೇಶನ್ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದ ಎಲ್ಲ ಪದವಿ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಸವದತ್ತಿ ತಾಲ್ಲೂಕಿನ ಯರಗಟ್ಟಿಯಲ್ಲಿ ಶುಕ್ರವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು.

ಕಾಲೇಜು ಆವರಣದಿಂದ ಸಂಗೊಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ಮೆರವಣಿಗೆ ಮುಖಾಂತರ ಸಾಗಿದ ವಿದ್ಯಾರ್ಥಿಗಳು ಉಪತಹಶೀಲ್ದಾರರ ಮುಖಾಂತರ ಕುಲಪತಿಗಳಿಗೆ ಮನವಿ ಸಲ್ಲಿಸಿದರು.

2011-12 ನೇ ಸಾಲಿನಲ್ಲಿ ಕೇವಲ 90 ರೂಪಾಯಿ ಇದ್ದ ಪರೀಕ್ಷಾ ಶುಲ್ಕವನ್ನು ವಿದ್ಯಾರ್ಥಿಗಳ ವಿರೋಧದ ನಡುವೆಯೂ 700 ರೂಪಾಯಿಗಳಿಗೆ ಏರಿಸಲಾಯಿತು. ಪ್ರಸಕ್ತ ಸಾಲಿನಲ್ಲಿ 820 ರೂಪಾಯಿಗಳಿಗೆ ಪರೀಕ್ಷಾ ಶುಲ್ಕವನ್ನು ಏರಿಸಿ ವಿದ್ಯಾರ್ಥಿಗಳನ್ನು ಪರದಾಡುವಂತೆ ಮಾಡಿದೆ ಎಂದು ಪ್ರತಿಭಟನಾಕಾರರು ದೂರಿದರು.

ಕೂಡಲೇ ವಿಶ್ವವಿದ್ಯಾಲಯವು ಹೆಚ್ಚಿಸಿರುವ ಪರೀಕ್ಷಾ ಶುಲ್ಕವನ್ನು ಹಿಂದಕ್ಕೆ ಪಡೆಯಬೇಕು. ಪರೀಕ್ಷಾ ಶುಲ್ಕ ಇಳಿಕೆಯಾಗುವವರೆಗೆ ಹೋರಾಟ ಮುಂದುವರಿಸಲಾಗುವುದು. ಪರೀಕ್ಷಾ ಶುಲ್ಕ ಇಳಿಸದಿದ್ದರೆ ಸಾವಿರಾರು ವಿದ್ಯಾರ್ಥಿಗಳೊಂದಿಗೆ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ವಿದ್ಯಾರ್ಥಿಗಳು ನೀಡಿದರು.

ಲಕ್ಕಪ್ಪ ಬಿಜ್ಜನ್ನವರ, ಈರಪ್ಪ ರಾಯರ, ಬಸವರಾಜ ಗುಂಡ್ಲೂರ, ಶ್ರೀಧರ ಪಟ್ಟಣಶೆಟ್ಟಿ, ಬಸವರಾಜ ದಳವಾಯಿ, ಸಿಕಂದರ ವಟ್ನಾಳ, ಸುನೀಲ ಆರೆನ್ನವರ, ಸಿದ್ದು ತೇನಗಿ, ಅಶ್ವಿನಿ ಕನಬೂರ ಮತ್ತಿತರರು ಹಾಜರಿದ್ದರು.

ಕುಲಸಚಿವರ ಭೇಟಿ: ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಪದವಿ ತರಗತಿಗಳ ಪರೀಕ್ಷಾ ಶುಲ್ಕ ಇಳಿಸುವಂತೆ ಆಗ್ರಹಿಸಲು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯುತ್ ಆರ್ಗನೈಸೇಷನ್ ಮತ್ತು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ ಸಂಘಟನೆಗಳ ಕಾರ್ಯಕರ್ತರು ರಾಜ್ಯ ಕಾರ್ಯದರ್ಶಿ ಡಾ. ಎನ್.ಪ್ರಮೋದ್ ಹಾಗೂ ಜಿಲ್ಲಾ ಅಧ್ಯಕ್ಷ ಸಂಜೀವ ದಳವಾಯಿ ನೇತತ್ವದಲ್ಲಿ ಕುಲಸಚಿವ ಡಾ. ಶಾಂತಿನಾಥ ದಿಬ್ಬದ ಅವರನ್ನು ಶುಕ್ರವಾರ ಭೇಟಿ ಮಾಡಿ ಚರ್ಚೆ ನಡೆಸಿದರು.

ಪರೀಕ್ಷಾ ಶುಲ್ಕ ಹೆಚ್ಚಳದ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟ ತಮ್ಮ ಗಮನಕ್ಕೆ ಬಂದಿದೆ. ಈ ಕುರಿತು ಶುಲ್ಕ ನಿರ್ಧಾರ ಸಮಿತಿಯಲ್ಲಿ ಚರ್ಚಿಸಿ ಶೀಘ್ರದಲ್ಲಿ ವಿದ್ಯಾರ್ಥಿಗಳ ಹಿತ ಕಾಯುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಕುಲಸಚಿವರು ಭರವಸೆ ನೀಡಿದ್ದಾರೆ ಎಂದು ಡಾ. ಪ್ರಮೋದ್ ತಿಳಿಸಿದರು.

ಶುಲ್ಕ ತುಂಬಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗುವುದು. ಸೆ. 10 ರಂದು ಕುಲಪತಿಗಳ ಜೊತೆ ವಿದ್ಯಾರ್ಥಿ ಮುಖಂಡರ ಸಭೆಯನ್ನು ನಿಗದಿ ಮಾಡಲಾಗುವುದು. ಶುಲ್ಕ ಇಳಿಕೆಯ ನಿರ್ಧಾರವಾದರೆ, ಈಗಾಗಲೇ ತುಂಬಿರುವ ವಿದ್ಯಾರ್ಥಿಗಳ ಹೆಚ್ಚುವರಿ ಶುಲ್ಕವನ್ನು ಮರುಪಾವತಿಸಲು ಕ್ರಮಕೈಗೊಳ್ಳಲಾಗುವುದು ಎಂದು ಕುಲಸಚಿವರು ನಿಯೋಗಕ್ಕೆ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT