ಕೋಲ್ಕತ್ತ (ಪಿಟಿಐ): ಒಡಿಶಾ ಜಿಲ್ಲಾಧಿಕಾರಿ ಅಪಹರಣ ಪ್ರಕರಣವನ್ನು ಸುಖಾಂತ್ಯಗೊಳಿಸಲು ಅಲ್ಲಿನ ಸರ್ಕಾರ ಸರ್ವ ಪ್ರಯತ್ನ ನಡೆಸಿರುವ ಬೆನ್ನಲ್ಲೇ, ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ಅಧಿಕಾರಿ ಮತ್ತು ಶಿಕ್ಷಕಿಯೊಬ್ಬರು ಕಳೆದ ನಾಲ್ಕು ತಿಂಗಳ ಹಿಂದೆಯೇ ಅಪರಿಚಿತರಿಂದ ಅಪಹರಣಕ್ಕೆ ಒಳಗಾಗಿದ್ದರೂ ಈವರೆಗೆ ಅವರ ಬಗ್ಗೆ ಯಾವುದೇ ಸುಳಿವು ಲಭ್ಯವಾಗದ ಸಂಗತಿ ಬೆಳಕಿಗೆ ಬಂದಿದೆ. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ ಬಂಗಾಳ ಸರ್ಕಾರ ಇದೀಗ ತೀವ್ರ ಟೀಕೆಗಳಿಗೆ ಗುರಿಯಾಗಿದೆ.
ಅಪಹೃತರು ಸಾಕಷ್ಟು ಹಿಂದೆಯಿಂದಲೇ ಕಾಣೆಯಾಗಿದ್ದರೂ ಸರ್ಕಾರ ಯಾವುದೇ ತ್ವರಿತ ಕ್ರಮ ಕೈಗೊಂಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಆರೋಪಿಸಿದ್ದಾರೆ.