ಇಸ್ಲಾಮಾಬಾದ್ (ಐಎಎನ್ಎಸ್): ಸ್ವರಕ್ಷಣೆಗಾಗಿ ಸಣ್ಣ ಶಸ್ತ್ರಗಳನ್ನು ತಮ್ಮ ಬಳಿ ಇಟ್ಟುಕೊಳ್ಳಲು ಪಾಕಿಸ್ತಾನದ ಪತ್ರಕರ್ತರಿಗೆ ಸರ್ಕಾರ ಅವಕಾಶ ನೀಡಿದೆ.
ಭಯೋತ್ಪಾದಕ ಸಂಘಟನೆಗಳ ಬಗ್ಗೆ ದಿಟ್ಟವಾಗಿ ಬರೆಯುತ್ತಿದ್ದ `ಏಷ್ಯಾ ಟೈಮ್ಸ ಆನ್ಲೈನ್~ನ ಬ್ಯೂರೊ ಮುಖ್ಯಸ್ಥ ಸೈಯದ್ ಸಲೀಂ ಶಾಜಾದ್ ಬರ್ಬರವಾಗಿ ಹತ್ಯೆಗೊಳಗಾಗಿರುವ ಹಿನ್ನೆಲೆಯಲ್ಲಿ, ಒಳಾಡಳಿತ ಸಚಿವ ರೆಹಮಾನ್ ಮಲಿಕ್ ಈ ಕುರಿತು ಆದೇಶ ಹೊರಡಿಸಿದ್ದಾರೆ.
ಈ ನಡುವೆ, ಸೈಯದ್ ಹತ್ಯೆಗೆ ಸ್ಥಳೀಯ ಹಾಗೂ ಜಾಗತಿಕವಾಗಿ ತೀವ್ರ ಖಂಡನೆ ವ್ಯಕ್ತವಾಗಿದೆ. ಅಮೆರಿಕ ಸಹ ಘಟನೆಯನ್ನು ಖಂಡಿಸಿದ್ದು, ತನಿಖೆಗೆ ಸರ್ಕಾರವನ್ನು ಒತ್ತಾಯಿಸಿದೆ. ಅಂತರ ರಾಷ್ಟ್ರೀಯ ಮಾಧ್ಯಮ ಹಾಗೂ ಮಾನವ ಹಕ್ಕು ಸಂಘಟನೆಗಳು `ಇದು ಬೇಹುಗಾರಿಕಾ ಸಂಸ್ಥೆ ಐಎಸ್ಐನ ಕೃತ್ಯ~ ಎಂದು ಟೀಕಿಸಿವೆ.
ಸೈಯದ್ ಹತ್ಯೆಗೆ ಐಎಸ್ಐ ಹೊಣೆ ಎಂಬ ಶಂಕೆ ದೇಶದೆಲ್ಲೆಡೆ ವ್ಯಕ್ತವಾಗಿದೆ. ಆದರೆ, ಈ ಆರೋಪವನ್ನು ಐಎಸ್ಐ ತಳ್ಳಿಹಾಕಿದೆ.
ದುರಂತ: ಐದು ಸಾವು
ಇಸ್ಲಾಮಾಬಾದ್ (ಐಎಎಎಸ್): ಪಾಕಿಸ್ತಾನದಲ್ಲಿ ಹೆಲಿಕಾಪ್ಟರೊಂದು ಸಿಂಧೂ ನದಿಗೆ ಅಪ್ಪಳಿಸಿದ ಪರಿಣಾಮ ಪಂಜಾಬ್ ವಲಯದ ಅರೆಸೇನಾ ಪಡೆಯ ಉನ್ನತ ಅಧಿಕಾರಿ ಸೇರಿದಂತೆ ಐವರು ಮೃತರಾಗಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.