ಚಿಕ್ಕಬಳ್ಳಾಪುರ: ವಿದೇಶದಿಂದ ಪುರಿ ಜೋಳ (ಪಾಪ್ಕಾರ್ನ್) ಯಾವುದೇ ಕಾರಣಕ್ಕೂ ಆಮದು ಮಾಡಿಕೊಳ್ಳಬಾರದು. ದೇಶಿಯ ಪುರಿ ಜೋಳಕ್ಕೆ ಆದ್ಯತೆ ನೀಡಬೇಕೆ ಹೊರತು ವಿದೇಶದಿಂದ ಪುರಿ ಜೋಳ ಆಮದು ಮಾಡಿಕೊಳ್ಳಬಾರದು ಎಂದು ರೈತ ಮುಖಂಡ ಅಶ್ವತ್ಥ್ರೆಡ್ಡಿ ಆಗ್ರಹಿಸಿದರು. ವಿದೇಶದಿಂದ ಪಾಪ್ಕಾರ್ನ್ ಆಮದು ಮಾಡಿಕೊಳ್ಳುತ್ತಿರುವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾ ಪಾಪ್ಕಾರ್ನ್ ಜೋಳ ಬೆಳೆಗಾರರ ಮತ್ತು ಮಾರಾಟಗಾರರ ಸಂಘ ಆಯೋಜಿಸಿದ್ದ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಅನುಮತಿ ಪಡೆದಿರುವ ಕೆಲ ಕಂಪೆನಿಗಳು ಯಾವುದೇ ತೆರಿಗೆಯನ್ನು ಪಾವತಿಸದೇ 2002 ರಿಂದ 2010ರ ಅವಧಿಯಲ್ಲಿ ಸುಮಾರು 50 ಸಾವಿರ ಮೆಟ್ರಿಕ್ ಟನ್ ಪಾಪ್ಕಾರ್ನ್ ಜೋಳ ಆಮದು ಮಾಡಿಕೊಂಡಿವೆ. ವರ್ಷದಿಂದ ವರ್ಷಕ್ಕೆ ಆಮದು ಪ್ರಮಾಣ ಹೆಚ್ಚಾಗಿದೆ ಎಂದು ಅವರು ಆರೋಪಿಸಿದರು. ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಪಾಪ್ಕಾರ್ನ್ ಜೋಳವನ್ನು ಅತ್ಯಧಿಕ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಆದರೆ ವಿದೇಶಿ ಆಮದು ಪರಿಣಾಮ ರೈತರು ಬೆಳೆದ ಬೆಳೆಗೆ ಬೇಡಿಕೆ ಇಲ್ಲವಾಗಿದೆ. ಕೆಲ ರೈತರು ಪಾಪ್ಕಾರ್ನ್ ಜೋಳವನ್ನು ಅಗ್ಗದ ಬೆಲೆಗೆ ಕೋಳಿ ಫಾರಂಗಳಿಗೆ ಮಾರುತ್ತಿದ್ದಾರೆ ಎಂದು ಅವರು ತಿಳಿಸಿದರು.
ಕೆಲ ಕಂಪೆನಿಗಳು ವಿದೇಶದಿಂದ ಪಾಪ್ಕಾರ್ನ್ ಜೋಳವನ್ನು ಆಮದು ಮಾಡಿಕೊಳ್ಳುತ್ತಿರುವ ಕಾರಣ ಇಲ್ಲಿನ ಪಾಪ್ಕಾರ್ನ್ ಜೋಳಕ್ಕೆ ಬೇಡಿಕೆ ಕಡಿಮೆಯಾಗತೊಡಗಿದೆ. ಪಾಪ್ಕಾರ್ನ್ ಜೋಳವನ್ನೇ ಪ್ರಧಾನವಾಗಿ ಬೆಳೆಯುತ್ತಿರುವ ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ವಿಷಾದಿಸಿದರು. ರೈತ ಮುಖಂಡ ಮುನಿರಾಜು, ಜಿಲ್ಲಾ ಪಾಪ್ಕಾರ್ನ್ ಜೋಳ ಬೆಳೆಗಾರರ ಮತ್ತು ಮಾರಾಟಗಾರರ ಸಂಘದ ಮುಖಂಡರಾದ ಹನೀಫ್, ರಾಮಕೃಷ್ಣಪ್ಪ, ವೇಣು ಅಕುಲ್, ಆರ್.ಎನ್.ರಾಮಚಂದ್ರಪ್ಪ, ಆರ್.ಸಿ.ಸುರೇಶ್, ಬಿ.ವಿ.ಶೈಲೇಂದ್ರ, ರಾಮಕೃಷ್ಣಪ್ಪ, ರವಿಕುಮಾರ್, ಎಚ್.ಎಸ್.ಲೋಕನಾಥ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.