ದುದು (ರಾಜಸ್ತಾನ) (ಪಿಟಿಐ): ಆಡಳಿತದಲ್ಲಿ ಭ್ರಷ್ಟಾಚಾರ ತಡೆಗಟ್ಟಿ ಪಾರದರ್ಶಕತೆ ಕಾಪಾಡಿಕೊಳ್ಳಲು ತಮ್ಮ ಸರ್ಕಾರ ತಂತ್ರಜ್ಞಾನದ ಹೊಸ ಹೊಸ ವಿಧಾನಗಳನ್ನು ಬಳಸಿಕೊಳ್ಳಲು ಉತ್ಸುಕವಾಗಿದೆ ಎಂದು ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಹೇಳಿದರು.
ವಿವಿಧ ಯೋಜನೆಗಳ ಫಲಾನುಭವಿಗಳಿಗೆ `ಆಧಾರ್~ ವ್ಯವಸ್ಥೆ ಮೂಲಕ ನೇರವಾಗಿ ಹಣ ಬಿಡುಗಡೆ ಮಾಡುವ ಬಹುನಿರೀಕ್ಷಿತ ಯೋಜನೆಗೆ ಶನಿವಾರ ಇಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಲಕ್ಷಾಂತರ ಜನರಿಗೆ `ಆಧಾರ್~ ವ್ಯವಸ್ಥೆ ಪ್ರಯೋಜನಕಾರಿಯಾಗಿದೆ ಎಂದರು.
ಐದು ಕೋಟಿ ಜನರಿಗೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಲಾಭ ಪಡೆಯಲು, 1.5 ಕೋಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಡೆಯಲು, ಎರಡು ಕೋಟಿ ಜನರಿಗೆ ವೃದ್ಧಾಪ್ಯ ವೇತನ ಪಡೆಯಲು `ಆಧಾರ್~ ವ್ಯವಸ್ಥೆಯಡಿ ನೀಡಲಾದ ಸಂಖ್ಯೆಗಳು ನೆರವಾಗುತ್ತವೆ ಎಂದರು.
ದೆಹಲಿ, ಹರಿಯಾಣ, ಪಂಜಾಬ್, ತಮಿಳುನಾಡು, ಹಿಮಾಚಲ ಪ್ರದೇಶ, ರಾಜಸ್ತಾನ ಸೇರಿದಂತೆ 18 ರಾಜ್ಯಗಳ 60 ಕೋಟಿ ಜನರಿಗೆ 2014 ರ ಮಾರ್ಚ್ ಒಳಗೆ ಆಧಾರ್ ವ್ಯವಸ್ಥೆಯಡಿ ಪ್ರಯೋಜನ ಒದಗಿಸುವ ಗುರಿ ಹೊಂದಲಾಗಿದೆ ಎಂದು ಪ್ರಧಾನಿ ತಿಳಿಸಿದರು.
ಕಳೆದ ಎರಡು ವರ್ಷಗಳ ಅವಧಿಯಲ್ಲಿ 20 ಕೋಟಿಗೂ ಅಧಿಕ ಜನರಿಗೆ ಆಧಾರ್ ವ್ಯವಸ್ಥೆಯ ಸಂಖ್ಯೆಗಳನ್ನು ನೀಡಲಾಗಿದ್ದು, 21ನೇ ಕೋಟಿಯ ಆಧಾರ್ ಸಂಖ್ಯೆಯನ್ನು ಗ್ರಾಮಸ್ಥರೊಬ್ಬರಿಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ವಿತರಿಸಿದರು.
ಹಣ ದುರ್ಬಳಕೆ ತಡೆಯುವುದರ ಜತೆಗೆ ಸಮಯವನ್ನೂ ಈ ವ್ಯವಸ್ಥೆಯಿಂದ ಉಳಿಸಬಹುದು ಎಂದು ಭಾರತೀಯ ವಿಶಿಷ್ಟ ಗುರುತು ಸಂಖ್ಯೆ ಪ್ರಾಧಿಕಾರ (ಯುಐಡಿಎಐ) ಅಧ್ಯಕ್ಷ ನಂದನ್ ನಿಲೇಕಣಿ ತಿಳಿಸಿದರು.
ಪ್ರಾಧಿಕಾರದ ಮಹಾನಿರ್ದೇಶಕ ಆರ್.ಎಸ್. ಶರ್ಮಾ ಮಾತನಾಡಿ, ಈ ಯೋಜನೆ ಜಾರಿಯಾಗುತ್ತಿರುವ ದೇಶದ 51 ಜಿಲ್ಲೆಗಳ ಪೈಕಿ ಈಗಾಗಲೇ 20 ಜಿಲ್ಲೆಗಳಲ್ಲಿ ಶೇ 80ರಷ್ಟು ಕೆಲಸ ಇದೇ ಡಿಸೆಂಬರ್ ಹೊತ್ತಿಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಹಣಕಾಸು ಸಚಿವ ಪಿ. ಚಿದಂಬರಂ, ರಾಜಸ್ತಾನ ಮುಖ್ಯಮಂತ್ರಿ ಅಶೋಕ ಗೆಹ್ಲೊಟ್, ಸಂಪರ್ಕ ಖಾತೆ ರಾಜ್ಯ ಸಚಿವ ಸಚಿನ್ ಪೈಲಟ್ ಸಹ ಇದ್ದರು.
ಎಲ್ಲೆಲ್ಲಿ ಯಾವುದಕ್ಕೆ?
ಈ ಕೆಳಕಂಡ ವಿವಿಧ ರಾಜ್ಯಗಳ ಜಿಲ್ಲೆಗಳಲ್ಲಿ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ `ಆಧಾರ್~ ವ್ಯವಸ್ಥೆಯಡಿ ಫಲಾನುಭವಿಗಳಿಗೆ ಪ್ರಯೋಜನ ಒದಗಿಸಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.
ಆಂಧ್ರದ ಕಾಕಿನಾಡ, ಪೂರ್ವ ಗೋದಾವರಿ ಜಿಲ್ಲೆಗಳು (ಸಾರ್ವಜನಿಕ ಪಡಿತರ ವ್ಯವಸ್ಥೆ), ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆ (ಸಾಮಾಜಿಕ ಭದ್ರತಾ ಯೋಜನೆ), ಕರ್ನಾಟಕದ ಮೈಸೂರು (ಎಲ್ಪಿಜಿ ಸಿಲಿಂಡರ್ ವಿತರಣೆ), ಜಾರ್ಖಂಡ್ನ ರಾಮಗಢ (ಉದ್ಯೋಗ ಖಾತ್ರಿ ಯೋಜನೆ), ಪಶ್ಚಿಮ ತ್ರಿಪುರಾ ಜಿಲ್ಲೆ (ವೃದ್ಧಾಪ್ಯ ವೇತನ).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.