ತುಮಕೂರು: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ನಗರಪಾಲಿಕೆಗೆ ಆರು ತಿಂಗಳಲ್ಲಿ ಚುನಾವಣೆ ನಡೆಸಲು ಪಕ್ಷಾತೀತ ವಿರೋಧ ವ್ಯಕ್ತವಾಗಿದೆ.
ಪಾಲಿಕೆ ಸದಸ್ಯರನ್ನು ಪೂರ್ಣಾವಧಿಗೆ ಮುಂದುವರಿಸಲು ನೆರವಾಗುವ ಕಾನೂನು ತಿದ್ದುಪಡಿ ತರುವಂತೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಡಾ.ರಫೀಕ್ ಅಹಮದ್ ಇಲ್ಲಿ ಸೋಮವಾರ ಹೇಳಿದರು.
ನಗರಪಾಲಿಕೆ ಘೋಷಣೆಯ ಅಧಿಸೂಚನೆ ಪ್ರಕಟವಾದ 6 ತಿಂಗಳಲ್ಲಿ ಚುನಾವಣೆ ನಡೆಸಿ, ನೂತನ ಚುನಾಯಿತ ಮಂಡಳಿ ರಚಿಸಬೇಕೆಂಬ ಕಾನೂನಿದೆ. ಸರ್ಕಾರ ಚುನಾವಣೆಗೆ ಮುಂದಾದರೆ ಕಾನೂನು ತೊಡಕು ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಈಗಿರುವ ಕಾಯ್ದೆಗೆ ತಿದ್ದುಪಡಿ ತಂದು ಸದಸ್ಯರನ್ನು ಪೂರ್ಣಾವಧಿಗೆ ಮುಂದುವರಿಸಲು ಮುಖ್ಯಮಂತ್ರಿ, ಕಾನೂನು ಸಚಿವರಿಗೆ ಪಕ್ಷಾತೀತವಾಗಿ ಮಾನವಿ ಮಾಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರ ಬಿಡುಗಡೆ ಮಾಡಲಿರುವ ₨ 100 ಕೋಟಿ ಅನುದಾನಕ್ಕೆ ಈಗಾಗಲೇ ಕ್ರಿಯಾಯೋಜನೆ ಸಲ್ಲಿಸಲಾಗಿದೆ. ಈಗಿರುವ 35 ವಾರ್ಡ್ಗಳು 41 ವಾರ್ಡ್ಗಳಾಗಿ ಪುನರ್ವಿಂಗಡಣೆ ಆಗಲಿದ್ದು, ಪ್ರತಿ ವಾರ್ಡ್ ಅಭಿವೃದ್ಧಿಗೆ ₨ 1.2 ಕೋಟಿ ಅನುದಾನ ಒದಗಿಸಲಾಗುವುದು. ಪೊಲೀಸ್ ಇಲಾಖೆಗೆ ಶೇ 5, ಒಳಚರಂಡಿ ವ್ಯವಸ್ಥೆಗೆ ಶೇ 15, ನೀರು ಸರಬರಾಜು ಶೇ 15, ಇತರೆ ಕಾಮಗಾರಿಗಳಿಗೆ ಶೇ 10ರಷ್ಟು ಅನುದಾನವನ್ನು ಕ್ರಿಯಾಯೋಜನೆಯಲ್ಲಿ ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದರು.
2010–11ನೇ ಸಾಲಿನ ₨ 100 ಕೋಟಿ ವಿಶೇಷ ಅನುದಾನದಲ್ಲಿ ಬಿಡುಗಡೆ ಮಾಡಿರುವ ₨ 25 ಕೋಟಿಯಲ್ಲಿ ₨ 10 ಕೋಟಿ ಖರ್ಚಾಗಿದ್ದು, 20 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 2011–12ರಲ್ಲಿ ಬಿಡುಗಡೆಯಾದ ₨ 42 ಕೋಟಿಯಲ್ಲಿ ₨ 26 ಕೋಟಿ ವೆಚ್ಚದ 33 ಕಾಮಗಾರಿಗಳಿಗೆ ಜನವರಿಯಲ್ಲಿ ಚಾಲನೆ ನೀಡಲಾಗುವುದು. ಹಾಗೆಯೇ 2ನೇ ಹಂತದ ನಗರೋತ್ಥಾನ ಯೋಜನೆಯಲ್ಲಿ ₨ 30 ಕೋಟಿ, ಎಸ್ಎಫ್ಸಿಯಲ್ಲಿ 14.40 ಕೋಟಿ, 13ನೇ ಹಣಕಾಸು ಅನುದಾನದಲ್ಲಿ ₨ 7.43 ಕೋಟಿ ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.
ತ್ಯಾಜ್ಯ ಸಂಸ್ಕರಣ ಯಂತ್ರ
ಪ್ರತಿ ವಾರ್ಡ್ನಲ್ಲಿ ತ್ಯಾಜ್ಯ ಸಂಸ್ಕರಣ ಯಂತ್ರ ಅಳವಡಿಸಲು ಉದ್ದೇಶಿಸಲಾಗಿದೆ. ಪ್ರಾತ್ಯಕ್ಷಿಕೆಗಾಗಿ ಎರಡು ಯಂತ್ರಗಳನ್ನು ಖರೀದಿಸಲಾಗುವುದು. ಜಪಾನ್ ತಂತ್ರಜ್ಞಾನದ ಈ ಯಂತ್ರಗಳು 2 ಟನ್ ಕಸವನ್ನು 2 ಕೆ.ಜಿ. ಪುಡಿಯಾಗಿ ಮಾರ್ಪಡಿಸುವ ಸಾಮರ್ಥ್ಯ ಹೊಂದಿವೆ. ಈ ರೀತಿ ಬಂದ ಪುಡಿಯನ್ನು ಸಿಮೆಂಟ್ಗೂ ಮಿಶ್ರಣ ಮಾಡಬಹುದಾಗಿದೆ. ಬೆಂಗಳೂರು ಕೆಂಗೇರಿಯಲ್ಲಿ ಈ ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದು, ಸದಸ್ಯರೊಂದಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ, 6 ತಿಂಗಳ ನಂತರವೂ ಪಾಲಿಕೆ ಸದಸ್ಯರನ್ನು ಮುಂದುವರೆಸುವಂತೆ ಸರ್ಕಾರಕ್ಕೆ ಎಲ್ಲ ನಾಯಕರು ಮನವಿ ಮಾಡಲಿದ್ದಾರೆ. ಒಂದು ವೇಳೆ ಅತೃಪ್ತರು ಕಾನೂನು ಸಂಘರ್ಷಕ್ಕೆ ಇಳಿದರೆ ಸರ್ಕಾರದಿಂದಲೇ ನ್ಯಾಯಾಲಯಕ್ಕೆ ಆಕ್ಷೇಪಣೆ ಇಲ್ಲ ಎಂಬ ಪ್ರಮಾಣಪತ್ರ ಸಲ್ಲಿಸಲಾಗುತ್ತದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ನಗರಪಾಲಿಕೆ ಕಾನೂನು ಏನೇ ಇದ್ದರೂ ಸದಸ್ಯರ ಮುಂದುವರಿಕೆಗೆ ತೊಡಕಾಗದಂತೆ ತಿದ್ದುಪಡಿ ತರುವಂತೆ ಕೋರಿ ಮುಖ್ಯಮಂತ್ರಿ ಬಳಿಗೆ ನಿಯೋಗ ಕೊಂಡೊಯ್ಯಲಾಗುವುದು ಎಂದು ತಿಳಿಸಿದರು.
ಮೇಯರ್ ಗೀತಾ, ಉಪಮೇಯರ್ ಧನಲಕ್ಷ್ಮೀ, ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.