ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣದ ವರದಿಯನ್ನು ತಿರಸ್ಕರಿಸಿರುವ ಬಗ್ಗೆ ಲೋಕಸಭಾಧ್ಯಕ್ಷೆ ಮೀರಾ ಕುಮಾರ್ ಅವರು `ಯಾವುದೇ ಕಾರಣ~ ನೀಡಿಲ್ಲ ಎಂದು ಸಾರ್ವಜನಿಕ ಲೆಕ್ಕ ಸಮಿತಿ (ಪಿಎಸಿ) ಅಧ್ಯಕ್ಷ ಮುರಳಿ ಮನೋಹರ ಜೋಶಿ ಹೇಳಿದ್ದಾರೆ.
ವರದಿಯನ್ನು ವಾಪಸ್ ಮಾಡುವಾಗ ಸ್ಪೀಕರ್ ಅವರು ನೀಡಿರುವ ಕಾರಣಗಳ ಬಗ್ಗೆ ವಿವರಿಸಲು ನಿರಾಕರಿಸಿದ ಅವರು, ಹೊಸ ಪಿಎಸಿ ಮುಂದೆ ಈ ವರದಿ ಬಂದಾಗ ವಿವರಗಳು ಬಹಿರಂಗಗೊಳ್ಳುತ್ತವೆ ಎಂದಿದ್ದಾರೆ.
ಈ ವರ್ಷದ ಮೇ 1ರಂದು ಅಸ್ತಿತ್ವಕ್ಕೆ ಬಂದ ಹೊಸ ಪಿಎಸಿ ಅಧ್ಯಕ್ಷರೂ ಆಗಿರುವ ಜೋಷಿ, ಸಮಿತಿ ವರದಿಗೆ ಸಂಬಂಧಿಸಿದಂತೆ ಹೇಳುವುದಾದರೆ ಈ ವಿಷಯ ಇಲ್ಲಿಗೇ ಮುಕ್ತಾಯ ಆಗುವುದಿಲ್ಲ ಎಂದು ಹೇಳಿದ್ದಾರೆ.