ಯಾದಗಿರಿ: ಶೈಕ್ಷಣಿಕ ವರ್ಷ ಮುಗಿಯುತ್ತಿರುವ ಹಂತದಲ್ಲಿ ಸರ್ಕಾರ ಮತ್ತು ಪದವಿಪೂರ್ವ ಶಿಕ್ಷಣ ಮಂಡಳಿಗಳು ದಿಢೀರನೆ ಶುಲ್ಕವನ್ನು ಪ್ರಸಕ್ತ ಸಾಲಿನಲ್ಲೇ ಅನ್ವಯಿಸುವಂತೆ ಏರಿಸಿದ್ದು, ರಾಜ್ಯದ ಲಕ್ಷಾಂತರ ಪಿಯು ವಿದ್ಯಾರ್ಥಿಗಳಿಗೆ ಆಘಾತ ನೀಡಲು ಮುಂದಾಗಿವೆ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಆಕ್ರೋಶ ವ್ಯಕ್ತಪಡಿಸಿದೆ.
ಪದವಿ ಪೂರ್ವ ಕಾಲೇಜುಗಳಲ್ಲಿ ಬೋಧನಾ ಶುಲ್ಕ, ಪ್ರವೇಶ, ಪ್ರಯೋಗಾಲಯ ಮತ್ತು ಪರೀಕ್ಷಾ ಶುಲ್ಕವನ್ನು ಶೇ 20ರಿಂದ ಶೇ 33ರ ವರೆಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಏರಿಸಲು ಸರ್ಕಾರ ಆದೇಶಿಸಿದೆ. ಇದರಿಂದಾಗಿ ವಿವಿಧ ಕೋರ್ಸ್ಗಳ ಪಿಯು ವಿದ್ಯಾರ್ಥಿಗಳು ₨200ರಿಂದ ₨530ರ ವರೆಗೆ ಹೆಚ್ಚುವರಿ ಶುಲ್ಕವನ್ನು ಭರಿಸಬೇಕಾಗಿದೆ ಎಂದು ಹೇಳಿದೆ.
ಅಕ್ಟೋಬರ್ನಲ್ಲಿ ಹೊರಡಿಸಿರುವ ಈ ಆದೇಶ, ಇನ್ನೂ ಹಲವಾರು ಕಾಲೇಜುಗಳ ಪ್ರಾಂಶುಪಾಲರಿಗೆ ತಲುಪಿಲ್ಲ. ಈಗಾಗಲೇ ಶಿಕ್ಷಣವು ವ್ಯಾಪಾರೀಕರಣಗೊಂಡಿದ್ದು, ಪೋಷಕರಿಗೆ ದೊಡ್ಡ ಹೊರೆಯಾಗಿದೆ. ಈ ಶುಲ್ಕ ಏರಿಕೆಯು, ಬೆಲೆ ಏರಿಕೆಯ ಬೇಗೆಯಲ್ಲಿ ಬೇಯುತ್ತಿರುವವರಿಗೆ ಮತ್ತೊಂದು ಬರೆ ಎಳೆದಂತಾಗುತ್ತದೆ. ಈ ಕೂಡಲೇ ಈ ಆದೇಶವನ್ನು ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದೆ.
ಬೇಡಿಕೆಯ ಈಡೇರಿಕೆಗಾಗಿ ರಾಜ್ಯದ ಪಿಯು ವಿದ್ಯಾರ್ಥಿಗಳು ಹೋರಾಡಲು ಸಜ್ಜಾಗಬೇಕು ಎಂದು ಎಐಡಿಎಸ್ಒ ಜಿಲ್ಲಾ ಸಮಿತಿ ಅಧ್ಯಕ್ಷೆ ಗೌರಮ್ಮ ಸಿ.ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.