ಪುತ್ತೂರು: ಪುತ್ತೂರು ತಾಲ್ಲೂಕಿಗೆ ಮುಂದಿನ 5 ವರ್ಷದವರೆಗೆ ನೂತನ ಆಟೋರಿಕ್ಷಾ ಪರವಾನಗಿ ನೀಡುವುದನ್ನು ತಡೆ ಹಿಡಿಯುವಂತೆ ಆಗ್ರಹಿಸಿ ಕರ್ನಾಟಕ ರಿಕ್ಷಾ ಚಾಲಕ-ಮಾಲಕ ಸಂಘದ ವತಿಯಿಂದ ನಡೆಸುತ್ತಿರುವ ಪೋಸ್ಟ್ ಕಾರ್ಡ್ ಚಳವಳಿಯ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಮಾಡಾವು ಕಟ್ಟೆಯಲ್ಲಿ ಭಾನುವಾರ ನಡೆಯಿತು.
ಸಂಘದ ಕಾರ್ಯಾಧ್ಯಕ್ಷ ಗಿರೀಶ್ ನಾಯ್ಕ ಅವರು ಅಂಚೆ ಕಾರ್ಡ್ ಅನ್ನು ಡಬ್ಬಕ್ಕೆ ಹಾಕಿ ಚಳವಳಿಗೆ ಚಾಲನೆ ನೀಡಿದರು.
ಸಂಘವು ಹಲವು ವರ್ಷಗಳಿಂದ ಹೊಸ ರಿಕ್ಷಾಗಳಿಗೆ ಪರವಾನಗಿ ನೀಡುವುದನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ, ಸಾರಿಗೆ ಇಲಾಖೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಈ ಹಿನ್ನೆಲೆಯಲ್ಲಿ ಅಂಚೆ ಕಾರ್ಡ್ ಚಳವಳಿಯನ್ನು ನಿರಂತರವಾಗಿ ಸಂಘದ ವತಿಯಿಂದ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಸಂಘದ ಗೌರವ ಅಧ್ಯಕ್ಷ ಯು. ಲೋಕೇಶ್ ಹೆಗ್ಡೆ, ಗೌರವ ಸಲಹೆಗಾರ ಕೆ. ಜಯರಾಮ ಕುಲಾಲ್, ಸಲಹೆಗಾರರಾದ ಗಂಗಾಧರ ನೈತ್ತಾಡಿ, ಅಧ್ಯಕ್ಷ ಶೇಷಪ್ಪ ನಾಯ್ಕ, ಮಾಡಾವು ಕಟ್ಟೆ ಘಟಕ ಅಧ್ಯಕ್ಷ ಪದ್ಮಾನಾಭ ಬಲ್ಯಾಯ, ಪ್ರಧಾನ ಕಾರ್ಯದರ್ಶಿ ಕರುಣಾಕರ ರೈ, ಸದಸ್ಯರಾದ ಜಯರಾಮ, ಸುರೇಶ್. ಪಿ, ಕರುಣಾಕರ, ಪುರಂದರ, ರೋಹಿತ್ ಮತ್ತಿತರರು ಉಪಸ್ಥಿತರಿದ್ದರು.