ಬಳ್ಳಾರಿ: ಹಂಪಿಯಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ನಂತರ ನಿರಾಶ್ರಿತರಾದವರಿಗೆ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆ ಪೂರ್ಣಗೊಂಡ ಮೇಲೆ ಹಂಪಿ ಉತ್ಸವ ನಡೆಸುವುದು ಸೂಕ್ತ ಎಂಬುದು ತಮ್ಮ ಮನವಿ ಯಾಗಿದ್ದು, ಸರ್ಕಾರ ತಿಳಿಸುವ ಯಾವುದೇ ದಿನಾಂಕದಂದು ಉತ್ಸವ ನಡೆಸಲು ಜಿಲ್ಲಾಡಳಿತ ಸಿದ್ಧ ಎಂದು ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಹೇಳಿದರು.
ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ಫೆ. 12ರ ನಂತರ ಉತ್ಸವ ನಡೆಸಿದರೆ ವ್ಯವಸ್ಥೆಯ ದೃಷ್ಟಿಯಿಂದ ಅನುಕೂಲ ಆಗುತ್ತದೆ ಎಂದರು.
ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಜಾಗ ನಿಗದಿಯಾಗಿದ್ದು ನಿವೇಶನಗಳನ್ನು ಗುರುತು ಮಾಡಲಾಗಿದೆ. ಪುನರ್ವ ಸತಿಯ ವೇಳೆ 5 ಕೋಟಿ ರೂ.ಗಳನ್ನು ದೇವಸ್ಥಾನಕ್ಕೆ ಸಂಬಂಧಿಸಿದ ಕೆಲಸಗಳಿಗೆ ವಿನಿಯೋಗಿಸಲಾಗುವುದು ಎಂದರು.
3.5 ಕೋಟಿ ರೂಪಾಯಿಗಳಲ್ಲಿ ಕುಡಿಯುವ ನೀರು, ವಿದ್ಯುತ್, ರಸ್ತೆ, ಚರಂಡಿ ಮುಂತಾದ ಮೂಲಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. ಇನ್ನುಳಿದ ಹಣದಲ್ಲಿ `ಆಶ್ರಯ~ ಯೋಜನೆಯ ರೀತಿಯಲ್ಲಿ ನಿರಾಶ್ರಿತರಿಗೆ ಪರಿಹಾರ ನೀಡುವ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
25ರಂದು ಸಿಇಸಿ ತಂಡ: ಅಕ್ರಮ ಗಣಿಗಾರಿಕೆ ಪರಿಣಾಮಗಳ ಅಧ್ಯಯನ ಕ್ಕಾಗಿ ಸುಪ್ರೀಂ ಕೋರ್ಟ್ ನೇಮಿಸಿರುವ ಕೇಂದ್ರೀಯ ಉನ್ನತಾಧಿಕಾರ ಸಮಿತಿ ಇದೇ 25ರಂದು ಜಿಲ್ಲೆಗೆ ಭೇಟಿ ನೀಡಲಿದೆ ಎಂದು ಮಾಹಿತಿ ನೀಡಿದರು.
ತಂಡದ ಸದಸ್ಯರು ನಾಲ್ಕೈದು ದಿನ ಜಿಲ್ಲೆಯ ಗಣಿ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಅಧ್ಯಯನ ಕೈಗೊಳ್ಳ ಲಿದ್ದಾರೆ. ಈ ಕುರಿತು ಅಧಿಕಾರಿ ಗಳೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.