ಚನ್ನಗಿರಿ: ಹದಿಮೂರನೇ ಹಣಕಾಸು ಯೋಜನೆಯಡಿ ಪ.ಪಂ. ನೂತನ ಕಟ್ಟಡ ನಿರ್ಮಿಸಲಾಗುವುದು. ರಾಜ್ಯದಲ್ಲಿಯೇ ಮಾದರಿ ಕಟ್ಟಡ ನಿರ್ಮಿಸಲಾಗುವುದು ಈ ನಿಟ್ಟಿನಲ್ಲಿ ಎಲ್ಲಾ ಸದಸ್ಯರು ಪಟ್ಟಣದ ಅಭಿವೃದ್ಧಿಗೆ ತಮ್ಮೊಳಗಿರುವ ಭಿನ್ನಾಭಿಪ್ರಾಯಗಳನ್ನು ಬಿಡಬೇಕು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.ಸೋಮವಾರ ಪಟ್ಟಣದ ಪ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ಪುಷ್ಪಲತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಪ.ಪಂ. ಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಹಾಗೆಯೇ ಯುಜಿಡಿ ಯೋಜನೆಗಾಗಿ ್ಙ 48 ಕೋಟಿ ಅನುದಾನಕ್ಕೆ ಮನವಿ ಮಾಡಲಾಗಿದೆ.ಪಟ್ಟಣದ ಕೆರೆಗಳ ಅಭಿವೃದ್ಧಿಗೆ ್ಙ10 ಲಕ್ಷ ಅನುದಾನ ಬಿಡುಗಡೆಯಾಗಿದೆ. ನಿವೇಶನ ಹೊಂದಿದ ಬಡವರಿಗೆ 500 ಮನೆ ನಿರ್ಮಿಸಿಕೊಡಲಾಗುವುದು. ಇದಕ್ಕಾಗಿ 4 ಎಕರೆ ಜಮೀನು ಖರೀದಿಸಲಾಗಿದೆ. ಒಟ್ಟಾರೆ ಪಟ್ಟಣವನ್ನು ಸುಂದರ ಪಟ್ಟಣವನ್ನಾಗಿ ಮಾಡುವ ಕಾರ್ಯಕ್ಕೆ ಎಲ್ಲಾ ಸದಸ್ಯರು ಸಹಕಾರ ನೀಡಬೇಕೆಂದು ಅವರು ಕೋರಿದರು.
ಗ್ರಂಥಾಲಯ ಕಟ್ಟಡ ಕಾಮಗಾರಿ ಮುಗಿದು 8 ತಿಂಗಳಾದರೂ ಉದ್ಘಾಟನೆಯಾಗಿಲ್ಲ. ಪ.ಪಂ. ನಿರ್ಮಿಸಿರುವ ವಾಣಿಜ್ಯ ಮಳಿಗೆಗೆ ನಾಮಫಲಕ ಹಾಕಿಲ್ಲ. ಕಾಮಗಾರಿಗಳು ನಡೆದಿರುವ ಕಡೆ ಕೂಡಾ ಫಲಕ ಹಾಕಿಲ್ಲ. ಕಳಪೆ ಕಾಮಗಾರಿ ನಡೆದರೂ ಕೂಡಾ ಅದರ ಬಗ್ಗೆ ಗಮನಹರಿಸಿಲ್ಲ. ಒಟ್ಟಾರೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸದಸ್ಯರಾದ ಭಾರತಿ, ರಾಜು ಕರಡೇರ್, ಡಿ. ಚಿಕ್ಕಪ್ಪ, ಮೆಹರುನ್ನಿಸಾ ದೂರಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಕೆ. ಪರಮೇಶ್, ಇನ್ನು 15 ದಿನದಲ್ಲಿ ಎಲ್ಲಾ ಕಾರ್ಯ ಮಾಡಲಾಗುವುದು. ಕಳಪೆ ಕಾಮಗಾರಿ ಮಾಡಿವರ ಮೇಲೆ ಕ್ರಮ ಕೈಕೊಳ್ಳಲಾಗುವುದು ಎಂದರು.
14ನೇ ವಾರ್ಡಿನಲ್ಲಿ ್ಙ 2 ಲಕ್ಷ ವೆಚ್ಚದಲ್ಲಿ 50 ಮೀ. ರಸ್ತೆ ಮಾಡಲಾಗಿದೆ. ಕೇವಲ ಅರ್ಧ ಇಂಚಿನಷ್ಟು ಡಾಂಬರು ಹಾಕಲಾಗಿದೆ. ಒಂದೇ ತಿಂಗಳಲ್ಲಿಯೇ ಡಾಂಬರು ಕಿತ್ತು ಹೋಗುತ್ತಿದೆ. ಕಳಪೆ ಕಾಮಗಾರಿಯ ಬಗ್ಗೆ ಇಂಜಿನಿಯರ್ ಗಮನ ಹರಿಸುತ್ತಿಲ್ಲ. ಕಚೇರಿಯಲ್ಲಿ ಕುಳಿತು ಬಿಲ್ ಮಾಡಿ ಕೊಡುವುದನ್ನು ಬಿಟ್ಟು, ಕಾಮಗಾರಿಗಳ ಗುಣಮಟ್ಟ ಪರೀಕ್ಷಿಸಿ, ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ನಾಮನಿರ್ದೇಶಿತ ಸದಸ್ಯ ನಾಡಿಗರ್ ಲೋಕೇಶಪ್ಪ ಒತ್ತಾಯಿಸಿದರು.
ಬಸ್ನಿಲ್ದಾಣದ ಕುಡಿಯುವ ನೀರಿನ ಟ್ಯಾಂಕಿಗೆ ತಿಂಗಳಾದರೂ ನೀರು ಬಿಟ್ಟಿಲ್ಲ. ಇಲ್ಲಿನ ತೆರೆದ ಚರಂಡಿಯಲ್ಲಿ ಅನೇಕರು ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ. ಈ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿದೆ. ಆದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸದಸ್ಯ ಎನ್. ಮಂಜಪ್ಪ ದೂರಿದರು.ಅಧಿಕಾರಿಗಳು ಕಾಮಗಾರಿಗಳ ಮೇಲ್ವಿಚಾರಣೆ ಕೈಗೊಳ್ಳಬೇಕು ಎಂದು ಉಪಾಧ್ಯಕ್ಷ ಕೆ.ಪಿ.ಎಂ. ಶಿವಲಿಂಗಯ್ಯ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.