ನವದೆಹಲಿ: ಕಳೆದ ವರ್ಷ ದೆಹಲಿಯಲ್ಲಿ ನಡೆದ ಪ್ಯಾರಾಮೆಡಿಕಲ್ ವಿದ್ಯಾರ್ಥಿ ಮೇಲಿನ ಬರ್ಬರ ಅತ್ಯಾಚಾರದಿಂದ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಮಹಿಳೆಯರ ವಿರುದ್ಧ ದೌರ್ಜನ್ಯ, ಅತ್ಯಾಚಾರ ಹಾಗೂ ಇತರ ಅಪರಾಧ ಪ್ರಕರಣತಡೆಯಲು ಹಲವು ಕ್ರಮ ಕೈ ಗೊಂಡಿದ್ದರೂ ಕೆಲವಷ್ಟೇ ಜಾರಿಯಾಗಿವೆ.
ಆದರೆ ಮಹಿಳೆಯರಿಗೆ ಪೂರ್ಣಪ್ರಮಾಣದಲ್ಲಿ ಭದ್ರತೆ ದೊರೆತಿಲ್ಲ. ಇದೆಲ್ಲಕ್ಕಿಂತ ಮುಖ್ಯವಾಗಿ ‘ನಿರ್ಭಯ ನಿಧಿಯಡಿ ಇಡಲಾಗಿರುವ ರೂ1000 ಕೋಟಿ ಹಣದಲ್ಲಿ ಒಂದೂ ರೂಪಾಯಿಯೂ ಖರ್ಚಾಗದೇ ಹಾಗೇ ಉಳಿದಿದೆ.
ಈ ಹಣದಲ್ಲಿ ಹೆಚ್ಚಿನ ಮಹಿಳಾ ಪೊಲೀಸರ ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿತ್ತು. ಆದರೆ ದೇಶದಾದ್ಯಂತ ಪೊಲೀಸ್ ಪಡೆಯಲ್ಲಿ ಶೇ 6ರಷ್ಟು ಮಾತ್ರ ಮಹಿಳೆಯರು ಇದ್ದಾರೆ.
ನಿರ್ಭಯ ನಿಧಿ ಮೀಸಲಿಟ್ಟಿರುವುದನ್ನು ಈ ವರ್ಷದ ಫೆಬ್ರುವರಿಯಲ್ಲಿ ಮಂಡಿಸಲಾದ ಮುಂಗಡಪತ್ರದಲ್ಲಿ ಘೋಷಿಸಲಾಗಿತ್ತು. ಆದರೆ ನಿಧಿ ನಿಯಂತ್ರಣ ಯಾರು ಮಾಡಬೇಕು ಎಂಬ ಬಗೆಗಿನ ಗೊಂದಲವೇ ಹಣ ಖರ್ಚಾಗದೆ ಹಾಗೇ ಉಳಿಯಲು ಪ್ರಮುಖ ಕಾರಣವಾಗಿದೆ. ಈ ಕುರಿತು ಗೃಹ ಸೇರಿದಂತೆ ಹಲವು ಸಚಿವಾಲಯಗಳು ಪ್ರಸ್ತಾವ ಮುಂದಿಟ್ಟಿವೆ.
ಮೀರಾ ಆತಂಕ
ಮಹಿಳೆಯರ ವಿರುದ್ಧ ಅಪರಾಧ ತಡೆಯಲು ಹಾಗೂ ಭದ್ರತೆ ಒದಗಿಸಲು ಸರ್ಕಾರ ಏನೆಲ್ಲ ಕಾನೂನನ್ನು ರೂಪಿಸಿದ್ದರೂ ಅದರಿಂದ ಹೆಚ್ಚಿನ ಪ್ರಯೋಜನ ಮಹಿಳೆಯರಿಗೆ ಸಿಗುತ್ತಿಲ್ಲ ಎಂದು ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.