ಚನ್ನಪಟ್ಟಣ: ಪೊಲೀಸರು ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿ ಸಾರ್ವಜನಿಕ ಆಸ್ತಿ-ಪಾಸ್ತಿ ರಕ್ಷಣೆಯಲ್ಲಿ ತೊಡಗಿದ್ದರೂ ಸಹ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿಲ್ಲ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್. ರುದ್ರಮುನಿ ವಿಷಾದಿಸಿದರು.
ಪಟ್ಟಣದ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ರಾಮನಗರ ಜಿಲ್ಲಾಧಿಕಾರಿ ಎಸ್. ಪುಟ್ಟಸ್ವಾಮಿ ಮಾತನಾಡಿ, ಸಮಾಜದಲ್ಲಿ ಹೆಚ್ಚಾಗುತ್ತಿರುವ ಸಮಾಜ ಘಾತುಕ ಕೆಲಸಗಳನ್ನು ತಡೆಯಲು ಪೊಲೀಸರ ಸಹಕಾರ ಅತ್ಯಗತ್ಯ, ಸಾರ್ವಜನಿಕರೂ ಸಹ ಅಪರಾಧ ಕೃತ್ಯಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದರು.
ಆರೊಗ್ಯಕರ ಸಮಾಜಕ್ಕೆ ಪೊಲೀಸ್ ಇಲಾಖೆಯ ಕೊಡುಗೆ ಅಪಾರವಾಗಿದ್ದು, ಸಾರ್ವಜನಿಕರು ಪೊಲೀಸರ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು ಎಂದರು.
ಹುತಾತ್ಮರಾದ ಪೊಲೀಸ್ ಸಮಾಧಿಗೆ ಜಿಲ್ಲಾಧಿಕಾರಿ ಪುಟ್ಟಸ್ವಾಮಿ, ನ್ಯಾಯಾಧೀಶ ರುದ್ರಮುನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಸನಹಳ್ಳಿ, ರಾಮನಗರ ಡಿವೈಎಸ್ಪ್ ರಾಮಕೃಷ್ಣಪ್ಪ, ಚನ್ನಪಟ್ಟಣ ಡಿವೈಎಸ್ಪಿ ಸಿದ್ದಪ್ಪ, ನಗರಸಭೆ ಅಧ್ಯಕ್ಷೆ ರೇಷ್ಮಾಭಾನು, ಪತ್ರಕರ್ತ ಸು.ತ. ರಾಮೇಗೌಡ ಸೇರಿದಂತೆ ಹಲವರು ಪುಷ್ಪಗುಚ್ಚವಿರಿಸಿ ನಮನ ಸಲ್ಲಿಸಿದರು.
ಹುತಾತ್ಮ ಸ್ಮರಣಾರ್ಥ ಕವಾಯತು, ವಾಲಿಫೈರಿಂಗ್, ಮೌನಾಚರಣೆ ನಡೆಯಿತು. ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಸನಹಳ್ಳಿ ಈ ವರ್ಷ ಹುತಾತ್ಮರಾದ ಪೊಲೀಸರ ಪಟ್ಟಿಯನ್ನು ಕಾರ್ಯಕ್ರಮದಲ್ಲಿ ಓದಿ ಸ್ಮರಿಸಿದರು.