ಬೆಂಗಳೂರು: ‘ಬಿಬಿಎಂಪಿಯಲ್ಲಿ ಖಾಲಿಯಿರುವ 4,000 ಕ್ಕೂ ಹೆಚ್ಚು ಪೌರಕಾರ್ಮಿಕರ ಹುದ್ದೆಗಳಿಗೆ ತಕ್ಷಣದಲ್ಲಿ ನೇಮಕಾತಿಗೆ ಕ್ರಮಕೈಗೊಳ್ಳಬೇಕು’ ಎಂದು ಬಿಬಿಎಂಪಿ ಪೌರಕಾರ್ಮಿಕರ ಮತ್ತು ಆರೋಗ್ಯ ಗ್ಯಾಂಗ್ಮೆನ್ಗಳ ಸಂಘವು ಆಗ್ರಹಿಸಿದೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಪೋತಣ್ಣ ಅವರು, ‘ಪೌರಕಾರ್ಮಿಕರ ನೇಮಕಾತಿಗೆ ಹಿಂದಿನ ಸರ್ಕಾರ ಅನುಮೋದನೆ ನೀಡಿದ್ದು, ಈಗ ಅಧಿಕಾರಿಗಳು ಪತ್ರ ವ್ಯವಹಾರದಲ್ಲೇ ಕಾಲಹರಣ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಬಿಬಿಎಂಪಿಯಲ್ಲಿ ಗ್ರಾ.ಪಂಚಾಯಿತಿ ಸೇರ್ಪಡೆಯಾಗಿದೆ. ಅಲ್ಲಿ ಕೆಲಸ ಮಾಡುತ್ತಿರುವ 193 ದಿನಗೂಲಿ ಪೌರಕಾರ್ಮಿಕರನ್ನು ಕಾಯಂಗೊಳಿಸಿ, ಅವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನೀಡಬೇಕು’ ಎಂದರು.
‘ಜಕ್ಕರಾಯನಕೆರೆ, ಕೋಡಿಹಳ್ಳಿ, ಪಾಟರಿಟೌನ್, ವಿಲಿಯಮ್ಸ್ ಟೌನ್, ಕುಂಬಾರಗುಂಡಿ, ಜೆ.ಜೆ.ಆರ್ ನಗರ, ಕಸ್ತೂರ ಬಾ ನಗರ ಮತ್ತು ಇಂದಿರಾನಗರದ ಬಳಿ ಇರುವ ಕದಿರೇನಪಾಳ್ಯ ಇತರೆ ಕಡೆ ನಿರ್ವಸಿತ ಪೌರಕಾರ್ಮಿಕರಿಗೆ ನಿವೇಶನವನ್ನು ನೀಡುವುದಾಗಿ ಬಿಬಿಎಂಪಿ ಭರವಸೆಯನ್ನು ನೀಡಿತ್ತು. ಆದರೆ. ಆ ಭರವಸೆಯನ್ನು ಈಡೇರಿಸುವ ಪ್ರಯತ್ನವನ್ನು ಬಿಬಿಎಂಪಿ ಮಾಡಿಲ್ಲ’ ಎಂದು ಹೇಳಿದರು.
‘ಪೌರಕಾರ್ಮಿಕರು ಹಾಗೂ ಗ್ಯಾಂಗ್ಮೆನ್ಗಳಿಗೆ ಪಾಲಿಕೆ ಆರೋಗ್ಯ ಗುರುತಿನ ಚೀಟಿ ನೀಡಿದೆ. ಆದರೆ, ಪಾಲಿಕೆಯು ಗುರುತಿಸಿರುವ ಆಸ್ಪತ್ರೆಗಳಿಗೆ ಹೋದರೆ ಮುಂಗಡ ಹಣವನ್ನು ಕಟ್ಟಲು ಒತ್ತಾಯಿಸುತ್ತಾರೆ. ಇದರಿಂದ, ಆಸ್ಪತ್ರೆ ಆಡಳಿತ ಮಂಡಳಿಗಳ ಜತೆ ತುರ್ತು ಸಭೆ ನಡೆಸಿ ಸಮಸ್ಯೆಯನ್ನು ಬಗೆ ಹರಿಸಬೇಕು’ ಎಂದು ಒತ್ತಾಯಿಸಿದರು.
‘ಬಿಬಿಎಂಪಿಯು ಒಂದು ತಿಂಗಳ ಅವಧಿಯೊಳಗೆ ಈ ಎಲ್ಲ ಬೇಡಿಕೆಗಳನ್ನು ಈಡೇರಿಸದಿದ್ದರೆ, ಪ್ರತಿಭಟನೆ ನಡೆಸಲಾಗುವುದು’ ಎಂದರು.