ರಾಮನಗರ: ಕ್ಷೀಣಿಸುತ್ತಿರುವ ಪೌರಾಣಿಕ ನಾಟಕ ಕ್ಷೇತ್ರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಸಂಘ ಸಂಸ್ಥೆಗಳು ಸೇರಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಭೈರೇಗೌಡ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಪಾಂಚಜನ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ನಡೆದ `ಶನಿ ಪ್ರಭಾವ~ ಪೌರಾಣಿಕ ನಾಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ದೃಶ್ಯ ಮಾಧ್ಯಮಗಳ ಭರಾಟೆಯಲ್ಲಿ ನಾಟಕ ರಂಗಭೂಮಿ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ಪೂರ್ವಜರ ಕಲೆಯಾದ ಪೌರಾಣಿಕ ನಾಟಕ ಕ್ಷೇತ್ರವನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕಿದೆ. ಈ ನಿಟ್ಟಿನಲ್ಲಿ ಯುವ ಜನಾಂಗವನ್ನು ಸಿದ್ಧಪಡಿಸಬೇಕಿದೆ ಎಂದರು.
ಪಾಂಚಜನ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಎಚ್.ಶಿವರಾಮಯ್ಯ, ಕಾರ್ಯದರ್ಶಿ ಎಚ್.ಸುರೇಶ್, ಅಮರ ಜ್ಯೋತಿ ಕಲಾ ಬಳಗದ ಅಧ್ಯಕ್ಷ ವಿಜಯ್ಕುಮಾರ್, ಕಾರ್ಯದರ್ಶಿ ರವಿಹುಣಸನಹಳ್ಳಿ, ಹಂಸಧ್ವನಿ ಕಲಾ ಬಳಗದ ಅಧ್ಯಕ್ಷ ಬೈರೇಗೌಡ, ಗ್ರಾ.ಪಂ. ಸದಸ್ಯ ನಾಗರಾಜ ಸಿಂಗ್, ರಂಗಭೂಮಿ ಕಲಾವಿದರುಗಳಾದ ಮರಿಸ್ವಾಮಿ ದೊಡ್ಡಬಾಗಿಲು, ನಿಂಗೇಗೌಡ, ಪ್ರಭಾಕರ್, ಸಿದ್ದರಾಮೇಗೌಡ, ಪ್ರಸಾದ್, ಶಿವಾನಂದಮೂರ್ತಿ, ಸ್ವಾಮಿ ಅರ್ಚಕರಹಳ್ಳಿ ಇತರರು ಉಪಸ್ಥಿತರಿದ್ದರು.