ಬಳ್ಳಾರಿ: ಸರ್ಕಾರ ನೀಡುತ್ತಿರುವ ಎಲ್ಲ ರೀತಿಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಪ್ರತಿಯೊಬ್ಬರೂ ಸಾಕ್ಷರರಾಗಬೇಕು ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಹನುಮಂತಪ್ಪ ಸಲಹೆ ನೀಡಿದರು.
ತಾಲ್ಲೂಕಿನ ದಮ್ಮೂರು ಗ್ರಾಮದಲ್ಲಿ ಇತ್ತೀಚೆಗೆ ವಯಸ್ಕರ ಶಿಕ್ಷಣ ಕೇಂದ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಗಿರಿಜನ ಉಪಯೋಜನೆ ಅಡಿ ಜೆಎಸ್ಎಸ್ ಹಾಗೂ ಲೋಕಶಿಕ್ಷಣ ಸಮಿತಿಯು ಪರಿಶಿಷ್ಟ ಜನಾಂಗದ ಸಮುದಾಯದ ನವ ಸಾಕ್ಷರರಿಗಾಗಿ ಏರ್ಪಡಿಸಿದ್ದ 60 ದಿನಗಳ ವೃತ್ತಿ ಕೌಶಲ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅನಕ್ಷರಸ್ಥರು ಸಾಕ್ಷರತೆ ಹೊಂದಲು ಎಲ್ಲ ಗ್ರಾಮಗಳಲ್ಲೂ ಕಲಿಕಾ ಕೇಂದ್ರ ಪ್ರಾರಂಭಿಸಲಾಗಿದೆ. 15 ವರ್ಷದ ಮೇಲಿನ ಅನಕ್ಷರಸ್ಥರು ತಮ್ಮ ಗ್ರಾಮಗಳಲ್ಲಿನ ಕಲಿಕಾ ಕೇಂದ್ರಗಳಿಗೆ ನಿತ್ಯ ಸಂಜೆ ಭೇಟಿ ನೀಡಿ, ಅಕ್ಷರ ಕಲಿಯುವ ಮೂಲಕ ಪತ್ರಿಕೆಗಳನ್ನು ಓದುವಂತಾಗಬೇಕು ಎಂದ ಅವರು ಹೇಳಿದರು.
ಓದಿನಿಂದ ಜ್ಞಾನ ವೃದ್ಧಿಯಾಗುತ್ತದೆ. ಸರ್ಕಾರ ಸಾಕ್ಷರತೆಗೆ ಅಗತ್ಯವಿರುವ ಪೆನ್ಸಿಲ್, ರಬ್ಬರ್, ಮೆಂಡರ್, ಬ್ಲಾಕ್ಬೋರ್ಡ್ ಸೇರಿದಂತೆ ಮತ್ತಿತರ ಕಲಿಕಾ ಸಾಮಗ್ರಿಗಳನ್ನು ಒದಗಿಸುತ್ತಿದೆ. ಇದರ ಸದುಪಯೋಗ ಪಡೆಯಬೇಕು ಎಂದು ಅವರು ತಿಳಿಸಿದರು.
ಫಲಾನುಭವಿಗಳು ಕಲಿಕಾ ಕೇಂದ್ರದ ಪ್ರಯೋಜನ ಪಡೆದು ಸಾಕ್ಷರರಾಗಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಬಲರಾಗಬೇಕು ಎಂದು ಅವರು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಗೋವಿಂದ ರೆಡ್ಡಿ, ಮಲ್ಲಿಕಾರ್ಜುನಸ್ವಾಮಿ, ತಾಲ್ಲೂಕು ಸಂಯೋಜಕ ಜಿ. ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.