ಪೊಲೀಸ್ ಇನ್ಸ್ಪೆಕ್ಟರ್ ವಿಜಯ್ ಪ್ರಸಾದ್, ‘ಉರುಸ್ಗೆ ಅನುಮತಿ ಇಲ್ಲ. ನಿಮ್ಮನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ದಯವಿಟ್ಟು ಸಹಕರಿಸಿ’ ಎಂದು ವಿನಂತಿಸಿದರು. ಇದರಿಂದ ಭಾವೋದ್ವೇಗಕ್ಕೆ ಒಳಗಾದ ಕೆಲವು ಫಕೀರರು ಜೀಪ್ ಎದುರು ಧರಣಿ ನಡೆಸಲೆತ್ನಿಸಿದರು. ಬಾಬಾಬುಡನ್ಗಿರಿಯಲ್ಲಿ ನಿಷೇಧಾಜ್ಞೆ ಹೇರಿ, ಭಕ್ತರ ಪ್ರವೇಶ ನಿರ್ಬಂಧಿಸಿದ ಜಿಲ್ಲಾಡಳಿತದ ಕ್ರಮಕ್ಕೆ ಭಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಉರುಸ್ ಮಾಡದಿದ್ದರೆ ಬೇಡ, ದರ್ಶನಕ್ಕಾದರೂ ಅವಕಾಶ ಕೊಡಬೇಕಾಗಿತ್ತು’ ಎಂದು ಸೊಲ್ಲಾಪುರದಿಂದ ಪಾದುಕೆ ದರ್ಶನಕ್ಕಾಗಿ ಬಂದಿದ್ದ ಅಜೀಜ್ ಹೇಳಿದರು.