ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಕನಸು ಕಂಡವನಲ್ಲ

ಅಚ್ಚರಿ ಮೂಡಿಸಿದ ನರೇಂದ್ರ ಮೋದಿ ಹೇಳಿಕೆ
Last Updated 5 ಸೆಪ್ಟೆಂಬರ್ 2013, 19:29 IST
ಅಕ್ಷರ ಗಾತ್ರ

ಗಾಂಧಿನಗರ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ದೇಶದ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಲು ಬಿಜೆಪಿ ಹಿಂಜರಿಯುತ್ತಿರುವ ಹೊತ್ತಿನಲ್ಲಿಯೇ, `ನಾನು ದೊಡ್ಡ ಸ್ಥಾನದ ಕನಸು ಕಂಡವನಲ್ಲ. ಗುಜರಾತ್‌ನಲ್ಲಿ 2017ರ ವರೆಗೆ ಸಿಕ್ಕಿರುವ ಜನಾದೇಶವನ್ನು ಗೌರವಿಸುತ್ತೇನೆ' ಎಂದು ಹೇಳಿಕೆ ನೀಡಿ ಮೋದಿ ಅಚ್ಚರಿ ಹುಟ್ಟಿಸಿದ್ದಾರೆ.

ಬಿಜೆಪಿಯ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಾಗಿನಿಂದ ಅವರು ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸುದ್ದಿಯಲ್ಲಿದ್ದರು. ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಗುಜರಾತ್ ಅಭಿವೃದ್ಧಿ ಕಥಾನಕಗಳನ್ನು ಪ್ರಸ್ತಾಪಿಸಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬಹಿರಂಗ ಸವಾಲು ಹಾಕಿ ವಿವಾದಕ್ಕೂ ಕಾರಣರಾಗಿದ್ದರು.

ಆದರೆ ಈಗ ಅವರ ಮಾತಿನಲ್ಲಿ ಹಿಂದಿನ ಮಹತ್ವಾಕಾಂಕ್ಷೆ ಕಾಣುತ್ತಿಲ್ಲ. `ದೊಡ್ಡ ಸ್ಥಾನಕ್ಕೆ ಹಂಬಲಿಸಿದವನೇ ಅಲ್ಲ' ಎಂಬ ಅವರ ದಿಢೀರ್ ಹೇಳಿಕೆಯ ಹಿಂದೆ ಅಸಮಾಧಾನದ ಹೊಗೆ ಕಾಣುತ್ತಿದೆ. ತಮ್ಮನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಅಧಿಕೃತವಾಗಿ ಘೋಷಿಸಲು ಬಿಜೆಪಿ ಮೀನಮೇಷ ಎಣಿಸುತ್ತಿರುವುದಕ್ಕೆ ಮೋದಿ ಬೇಸರಗೊಂಡಿದ್ದಾರೆ ಎಂದೇ ಅರ್ಥೈಸಲಾಗುತ್ತಿದೆ.

ಶಿಕ್ಷಕರ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು `ದೊಡ್ಡ ಕನಸು ಕಾಣುವ ವ್ಯಕ್ತಿಗಳು ತಮ್ಮನ್ನೇ ನಾಶ ಮಾಡಿಕೊಳ್ಳುತ್ತಾರೆ. ಏನಾದರೂ ಆಗಬೇಕು ಎನ್ನುವುದಕ್ಕಿಂತ ಏನಾದರೂ ಮಾಡಬೇಕು ಎನ್ನುವುದು ಮುಖ್ಯವಾಗುತ್ತದೆ' ಎಂದು ಮಾರ್ಮಿಕವಾಗಿ ನುಡಿದರು.

2014ರಲ್ಲಿ ಪ್ರಧಾನಿಯಾದ ಬಳಿಕ ನೀವು ನಮ್ಮಂದಿಗೆ ಸಂವಾದ ನಡೆಸುವಿರಾ ಎಂದು ವಿದ್ಯಾರ್ಥಿಯೊಬ್ಬರು ಪ್ರಶ್ನೆ ಕೇಳಿದಾಗ, `ನಾನು ಎಂದೂ ಆ ಕನಸು ಕಂಡಿಲ್ಲ. ರಾಜ್ಯದ ಜನರ ಸೇವೆ ಮಾಡುತ್ತೇನೆ' ಎಂದು ಉತ್ತರಿಸಿದರು.

`ಪ್ರಧಾನಿ ಅಭ್ಯರ್ಥಿ ಯಾರು ಎನ್ನುವ ವಿಷಯದಲ್ಲಿ ಪಕ್ಷದಲ್ಲಿ ಗೊಂದಲವಿಲ್ಲ' ಎಂದು ಕೆಲವು ದಿನಗಳ ಹಿಂದೆ ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಹೇಳಿದ್ದರು.

ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂದು ಜೇಟ್ಲಿ ಆಗಾಗ ಹೇಳುತ್ತಲೇ ಬಂದಿದ್ದಾರೆ. ಆದರೆ ಎಲ್.ಕೆ.ಅಡ್ವಾಣಿ ಸೇರಿದಂತೆ ಹಿರಿಯ ಮುಖಂಡರಿಗೆ ಇದು ಸುತಾರಾಂ ಇಷ್ಟವಿಲ್ಲಎನ್ನಲಾಗುತ್ತಿದೆ.  ಇನ್ನು, ಬಿಜೆಪಿಯ ಪ್ರಮುಖರಲ್ಲಿ ಕೆಲವರು ಗುಜರಾತ್‌ನ `ಉಕ್ಕಿನ ಮನುಷ್ಯ'ನನ್ನು ಧ್ರುವೀಕರಣ ಶಕ್ತಿ ಎಂದೇ ಭಾವಿಸಿದ್ದಾರೆ.

ಲೋಕಸಭೆಯಲ್ಲಿ ಹಣಾಹಣಿ
ನವದೆಹಲಿ (ಪಿಟಿಐ): ರಾಷ್ಟ್ರ ರಾಜಕಾರಣದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ  ಪ್ರಭಾವ ಹೆಚ್ಚುತ್ತಿರುವುದಕ್ಕೆ ಕಾಂಗ್ರೆಸ್ ಸದಸ್ಯರೊಬ್ಬರು ಗುರುವಾರ ಲೋಕಸಭೆಯಲ್ಲಿ ಬಿಜೆಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

`ನಾವು ನಾಗಪುರದಿಂದ ಆದೇಶ ಪಡೆಯುವುದಿಲ್ಲ (ಆರ್‌ಎಸ್‌ಎಸ್ ಪ್ರಧಾನ ಕಚೇರಿ). ಈಗ ಬಿಜೆಪಿಯವರಿಗೆ ಆದೇಶ ನಾಗಪುರದಿಂದ ಬರುತ್ತದೆಯೋ ಅಥವಾ ಅಹಮದಾಬಾದ್‌ನಿಂದಲೋ ಎಂಬ ಗೊಂದಲ ಕಾಡುತ್ತಿದೆ' ಎಂದು ಕಾಂಗ್ರೆಸ್ ಸದಸ್ಯ ಮಧು ಗೌಡ್ ಯಕ್ಷಿ ಅವರು ಪರೋಕ್ಷವಾಗಿ ಮೋದಿ ಅವರನ್ನು ಉಲ್ಲೇಖಿಸಿ ಲೇವಡಿ ಮಾಡಿದರು.

ಅನುದಾನ ಬೇಡಿಕೆ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದ ಯಕ್ಷಿ, ಗುಜರಾತ್ ಅಭಿವೃದ್ಧಿಯ ಕಥನಗಳು ಸತ್ಯಕ್ಕಿಂತ ಮಿಗಿಲಾಗಿ ಮಿಥ್ಯೆ ಎನಿಸಿಕೊಂಡಿವೆ ಎಂದು ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು.

ದಿಗ್ವಿಜಯ್ ಸಿಂಗ್ ನೇತೃತ್ವದಲ್ಲಿ ಈ ಹಿಂದೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಆಡಳಿತದ ಬಗ್ಗೆ ಬಿಜೆಪಿ ಸದಸ್ಯ ಅನಂತ ಕುಮಾರ್ ಮಾತನಾಡಿದಾಗ ಲೋಕಸಭೆ ವಾಕ್ಸಮರಕ್ಕೆ ಸಾಕ್ಷಿಯಾಯಿತು.

`ದಿಗ್ವಿಜಯ್ ಅವ್ಯವಸ್ಥೆ ಸೃಷ್ಟಿಸಿದ್ದರು. ಶಿವರಾಜ್ ಸಿಂಗ್ ಚೌಹಾಣ್ ಅವರು ಅಭಿವೃದ್ಧಿಗೆ ಕಾರಣರಾಗಿದ್ದಾರೆ' ಎಂದು ಕುಮಾರ್ ನುಡಿದರು.

ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಾಂತಿಲಾಲ್ ಭೂರಿಯಾ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕಮಲ್ ನಾಥ್ ಅವರು ಅನಂತ ಕುಮಾರ್ ಹೇಳಿಕೆಗೆ ಎದಿರೇಟು ನೀಡಿದರು. ಭೂರಿಯಾ ಹಾಗೂ ಕಮಲ್ ನಾಥ್ ಇಬ್ಬರೂ ಮಧ್ಯಪ್ರದೇಶದವರೇ ಆಗಿದ್ದಾರೆ.

`ಕಮಲ್‌ನಾಥ್ ಅವರಿಗೆ ವಾಸ್ತವ ಏನು ಎನ್ನುವುದು ಗೊತ್ತಿದೆ' ಎಂದು ಬಿಜೆಪಿಯ ಮತ್ತೊಬ್ಬ ಸದಸ್ಯರು ಹೇಳಿದರು.

ಮೋದಿ ಹೇಳಿದ್ದೇನು?
ಏನು ಮಾಡುತ್ತೇವೆ ಎನ್ನುವುದು ಮುಖ್ಯ

ಗುಜರಾತ್‌ನಲ್ಲಿ ಸಿಕ್ಕಜನಾದೇಶಕ್ಕೆ ಬದ್ಧ

ದೊಡ್ಡ ಕನಸು ಇಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT