ಹೊಸಪೇಟೆ: ವಿಜಯನಗರ ವಿಧಾನ ಸಭಾ ಕ್ಷೇತ್ರದ ಜನತೆಯ ವಿಶ್ವಾಸ ದಿಂದಾಗಿ ತಮಗೆ ಸಚಿವ ಸ್ಥಾನ ಲಭಿಸಿದ್ದು, ಕ್ಷೇತ್ರದ, ಜಿಲ್ಲೆಯ ಹಾಗೂ ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಶ್ರಮ ವಹಿಸುವುದಾಗಿ ಪ್ರವಾಸೋದ್ಯಮ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದರು.
ಮತದಾರರು, ಪಕ್ಷದ ಕಾರ್ಯ ಕರ್ತರು ಹಾಗೂ ಸಂಘಟನೆಗಳಿಂದ ತಮ್ಮ ಊರಾದ ಹೊಸಪೇಟೆಯಲ್ಲಿ ಭವ್ಯ ಸ್ವಾಗತ ಪಡೆದ ನಂತರ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯನಗರ ವಿಧಾನಸಭಾ ಕ್ಷೇತ್ರ ವಿಶ್ವ ಪರಂಪರೆಯ ಹಂಪಿ ವ್ಯಾಪ್ತಿಯಲ್ಲಿ ಬರುವುದರಿಂದ ರಾಷ್ಟ್ರ ನಾಯಕರು, ರಾಜ್ಯದ ಪಕ್ಷದ ನಾಯಕರು ಹಾಗೂ ಮುಖ್ಯಮಂತ್ರಿಗಳು ಹೆಚ್ಚಿನ ಭರವಸೆ ಇಟ್ಟುಕೊಂಡಿದ್ದಾರೆ. ಈ ಮೊದಲು ಕ್ಷೇತ್ರದ ಮತದಾರರಿಗೆ ನೀಡಿದ ಭರವಸೆಯಂತೆ ದಿನಪೂರ್ತಿ ಅಭಿವೃದ್ಧಿಯ ಬಗ್ಗೆ ಗಮನ ನೀಡುವ ಮೂಲಕ ಭರವಸೆಯನ್ನು ಉಳಿಸಿ ಕೊಳ್ಳುವೆ ಎಂದು ಹೇಳಿದರು.
ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಲ್ಲಿ ಅನಗತ್ಯ ರಾಜಕೀಯ ಬೆರೆಸದೇ ರಾಜಕೀಯವನ್ನು ಚುನಾವಣೆಗೆ ಸೀಮಿತಗೊಳಿಸಿಕೊಂಡು ಅಭಿವೃದ್ಧಿ ಕೆಲಸಗಳಲ್ಲಿ ಎಲ್ಲರೊಂದಿಗೆ ಬೆರೆತು, ಹಿರಿಯರು, ಅನುಭವಿಗಳು, ಗಣ್ಯರ ಸಲಹೆ ಪಡೆದು ಅಧಿಕಾರಿ ಗಳೊಂದಿಗೆ ಸಾರ್ವಜನಿಕರ ಸಮಸ್ಯೆ ಗಳಿಗೆ ಸ್ಪಂದನೆ ನೀಡುವುದಾಗಿ ಅವರು ಭರವಸೆ ನೀಡಿದರು.
ಪಕ್ಷ ಸಂಘಟನೆಗೆ ಕಾರ್ಯಕರ್ತರನ್ನು ಚುರುಕುಗೊಳಿಸುವ, ಅಧಿಕಾರಿಗಳಿಗೆ ಹೇಳಿ ಕುಂಠಿತವಾಗಿರುವ ಅಭಿವೃದ್ಧಿ ಕಾರ್ಯಗಳ ವೇಗ ಹೆಚ್ಚಿಸುವ ಮತ್ತು ಪ್ರವಾಸೋದ್ಯಮವನ್ನು ವಿಶ್ವ ಮನ್ನಣೆ ಯತ್ತ ಮುನ್ನಡೆಸುವ ಕಾರ್ಯ ತ್ವರಿತ ವಾಗಿ ಮಾಡುವುದಾಗಿ ಹೇಳಿದರು.