ನವದೆಹಲಿ, (ಐಎಎನ್ಎಸ್): ಇಲ್ಲಿನ ಸುಪ್ರೀಂ ಕೋರ್ಟ್ ಆವರಣದಲ್ಲಿನ ಹಿರಿಯ ವಕೀಲ ಮತ್ತು ಅಣ್ಣಾ ತಂಡದ ಸದಸ್ಯ ಪ್ರಶಾಂತ್ ಭೂಷಣ್ ಅವರ ಕೊಠಡಿಗೆ ನುಗ್ಗಿದ ಯುವಕರು ಅವರನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ತಮ್ಮ ಮೇಲೆ ಹಲ್ಲೆ ನಡೆಸಿದ ಯುವಕರು, ಕಾಶ್ಮಿರ ಕುರಿತಂತೆ ತಾವು ನೀಡಿದ್ದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರೆಂದು ಪ್ರಶಾಂತ್ ಭೂಷಣ್ ತಿಳಿಸಿದ್ದಾರೆ. ತಕ್ಷಣ ಅಲ್ಲಿಗೆ ಬಂದ ಇತರ ವಕೀಲರು ಆ ಯುವಕರನ್ನು ತಡೆದಿದ್ದಾರೆ.
ಶ್ರೀರಾಮ ಸೇನೆಗೆ ಸೇರಿದವರೆಂದು ಹೇಳಿಕೊಂಡಿರುವ ಈ ಯುವಕರ ವಿರುದ್ಧ ಪ್ರಶಾಂತ್ ಭೂಷಣ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಹಲ್ಲೆ ನಡೆಸಿದ ಯುವಕರಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಇನ್ನಿಬ್ಬರು ಯುವಕರು ತಪ್ಪಿಸಿಕೊಂಡು ಹೋಗಿದ್ದಾರೆ.