ಮುಂಬೈ (ಪಿಟಿಐ): ವೇಗದ ಬೌಲರ್ ಆಶೀಶ್ ನೆಹ್ರಾ ಅವರು ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಲಭ್ಯರಾಗುವುದು ಅನುಮಾನ. ಪಾಕಿಸ್ತಾನ ವಿರುದ್ಧ ಬುಧವಾರ ನಡೆದ ಸೆಮಿಫೈನಲ್ ಪಂದ್ಯದ ವೇಳೆ ನೆಹ್ರಾ ಕೈಬೆರಳಿಗೆ ಗಾಯವಾಗಿತ್ತು.ನೆಹ್ರಾ ಫೈನಲ್ಗೆ ಅಲಭ್ಯರೇ ಎಂಬ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಆದರೆ ತಂಡದ ಮ್ಯಾನೇಜರ್ ರಂಜಿಬ್ ಬಿಸ್ವಾಲ್, ‘ಮೊಹಾಲಿ ಪಂದ್ಯದ ವೇಳೆ ನೆಹ್ರಾ ಅವರ ಬಲಗೈಯ ನಡುಬೆರಳಿಗೆ ಗಾಯವಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಅವರು ಫೈನಲ್ ಪಂದ್ಯದ ವೇಳೆಗೆ ಚೇತರಿಸಿಕೊಳ್ಳುವುದು ಅನುಮಾನ’ ಎಂದಿದ್ದಾರೆ.ಪಾಕ್ ವಿರುದ್ಧದ ಪಂದ್ಯದಲ್ಲಿ ಡೀಪ್ ಮಿಡ್ ವಿಕೆಟ್ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಸಂದರ್ಭ ಕ್ಯಾಚ್ ಪಡೆಯುವ ಪ್ರಯತ್ನದ ವೇಳೆ ನೆಹ್ರಾ ಕೈಬೆರಳಿಗೆ ಗಾಯವಾಗಿದೆ ಎಂದು ರಂಜಿಬ್ ಬಿಸ್ವಾಲ್ ಹೇಳಿದ್ದಾರೆ.
ತಂಡದ ಆಗಮನ: ವಾಂಖೇಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿರುವ ಮಹೇಂದ್ರ ಸಿಂಗ್ ನೇತೃತ್ವದ ಭಾರತ ತಂಡದ ಆಟಗಾರರು ಗುರುವಾರ ಸಂಜೆ ಮುಂಬೈಗೆ ಆಗಮಿಸಿದರು. ೂಹಾಲಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ತಂಡದ ಸದಸ್ಯರು ವಿಮಾನ ನಿಲ್ದಾಣದಿಂದ ನೇರವಾಗಿ ಹೋಟೆಲ್ಗೆ ತೆರಳಿದರು. ಗುರುವಾರ ಅಭ್ಯಾಸ ನಡೆಸದ ಆಟಗಾರರು ವಿಶ್ರಾಂತಿ ಪಡೆದರು.