ಪಾವಗಡ ಬರಪೀಡಿತ ಹಾಗೂ ಮಳೆಯಾಶ್ರಿತ ಪ್ರದೇಶವಾಗಿದೆ. ಮಳೆಗಾಲದಲ್ಲಿ ಮಳೆ ಬರುವುದು ತೀರಾ ಕಡಿಮೆ. ಇತ್ತೀಚೆಗೆ ಅಲ್ಪ ಸ್ವಲ್ಪ ಮಳೆಯಾಗಿ ಕೆರೆ ಕುಂಟೆಗಳ ದಾಹ ತೀರಿಸಿದಂತಾಗಿದೆ. ಇನ್ನು ಕುಡಿಯಲು ನೀರು ದೊರೆತರೂ, ಅದು ಫ್ಲೋರೈಡ್ ಮಿಶ್ರಿತವಾಗಿದೆ. ಇದರಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿದ್ದು, ಅದು ಘನವಾಗಿ ಪರಿವರ್ತನೆಗೊಂಡು ಕಿಡ್ನಿಯಲ್ಲಿ ಕಲ್ಲುಗಳಾಗುತ್ತಿವೆ.
ಮೂಳೆಗಳ ಮೇಲೆ ಈ ಫ್ಲೋರೈಡ್ ಅಂಶ ಕೂತು ಮೂಳೆ ಸವೆಯುತ್ತಿವೆ. ಆದರೂ ಸಹ ವಿಧಿಯಿಲ್ಲದೆ ಬದುಕಬೇಕೆಂಬ ಹಂಬಲದಿಂದ ಅದೇ ನೀರನ್ನು ಕುಡಿದು ಅನೇಕ ರೋಗಗಳಗೆ ತುತ್ತಾಗುತ್ತಿದ್ದಾರೆ. ವಯಸ್ಸಾದವರು ಕೈ ಕಾಲುಗಳ ನಿಶ್ಶಕ್ತಿಯಿಂದ ಬಳಲುತ್ತಿದ್ದಾರೆ. ಚಿಕ್ಕ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಇನ್ನು ಹಲ್ಲುಗಳು ನಲವತ್ತು ವರ್ಷಕ್ಕೇ ಉದುರುತ್ತವೆ. ಬೆರಳೆಣಿಕೆಯಷ್ಟು ಮಾತ್ರ ಜಲ ಶುದ್ದೀಕರಣ ಘಟಕಗಳು ಇವೆ. ತಾಲ್ಲೂಕಿನ ಹಲವೆಡೆ ಘಟಕಗಳನ್ನು ನಿರ್ಮಿಸಲು ಈ ಭಾಗದ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳುವ ಅನಿವಾರ್ಯ ಇದೆ.