ಬಸವಕಲ್ಯಾಣ: ತಾಲ್ಲೂಕಿನ ಬಟಗೇರಾ ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ದಸರಾ ಹಬ್ಬದ ಅಂಗವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಬೆಳ್ಳಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿದ್ದರಿಂದ ಅನೇಕ ಭಕ್ತರು ದರ್ಶನ ಪಡೆದುಕೊಳ್ಳುತ್ತಿದ್ದಾರೆ.
ಸುಮಾರು 110 ಮೆಟ್ಟಿಲುಗಳಿರುವ ಎತ್ತರವಾದ ಗುಡ್ಡದ ಮೇಲಿನ ಈ ದೇವಸ್ಥಾನ ಈ ಭಾಗದಲ್ಲಿ ಜಾಗೃತ ದೇವಸ್ಥಾನವೆಂದು ಪ್ರಸಿದ್ಧವಾಗಿದೆ. ಆಕರ್ಷಕ ಗೋಪುರ, ಗರ್ಭಗುಡಿ ಮತ್ತು ಮುಖ ಮಂಟಪ ಸಹ ಆಕರ್ಷಕವಾಗಿದೆ. ಇಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದಾದರೂ ಪ್ರತಿ ದಸರಾಕ್ಕೆ ಹನ್ನೊಂದು ದಿನಗಳವರೆಗೆ ನವರಾತ್ರಿ ಸಂಭ್ರಮದಿಂದ ಆಚರಿಸಲಾಗುತ್ತದೆ.
ಈ ಸಲ ದೇವಸ್ಥಾನಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು ಘಟಸ್ಥಾಪನೆಯ ದಿನದಿಂದ ಪ್ರತಿದಿನ ವಿಶೇಷ ಪೂಜೆ ನಡೆಯುತ್ತಿದೆ. ರಾತ್ರಿ ದೇವಿ ಪುರಾಣ ಹೇಳಲಾಗುತ್ತಿದೆ.
ಭಜನೆ, ಜಾಗರಣೆ ನಡೆಯುತ್ತಿದೆ. ದಯಾನಂದ ಸ್ವಾಮಿ ರಾಮತೀರ್ಥ ಪುರಾಣ ಹೇಳುತ್ತಾರೆ. ಶ್ರೀರಂಗ ಭುರೆ ವಾಚಕರಾಗಿದ್ದಾರೆ.
ದೇವಸ್ಥಾನ ಸಮಿತಿ ಅಧ್ಯಕ್ಷ ಅರವಿಂದ ಕಾರಭಾರಿ ಇತರೆ ಪದಾಧಿಕಾರಿಗಳಾದ ಗೋವಿಂದರಾವ ದೇಸಾಯಿ, ಬಸವರಾಜ ಸ್ವಾಮಿ, ಸಂಜೀವ ಘೋಡಕೆ, ಶಾಂತಪ್ಪ ಮೇತ್ರೆ ಅವರು ಭಕ್ತಾದಿಗಳಿಗೆ ವ್ಯವಸ್ಥೆ ಕಲ್ಪಿಸಿದ್ದಾರೆ.
ಮಹಾನವಮಿಯ ದಿನ ದೇವಸ್ಥಾನದ ಎದುರು ಬನ್ನಿಪೂಜೆ ನಡೆಯುತ್ತದೆ. ಮರುದಿನ ಸವಾದ್ಯಗಳೊಂದಿಗೆ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದೆ.