ದೊಡ್ಡಬಳ್ಳಾಪುರ: `ನಮ್ಮ ಜನರ ನೋವು ನಲಿವುಗಳಿಗೆ ಸ್ಪಂದಿಸದ ಯಾವುದೇ ವ್ಯಕ್ತಿ ಬದುಕು ನಿರರ್ಥಕ~ ಎಂದು ಶಾಸಕ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಲಿ ಅಧ್ಯಕ್ಷ ಜೆ.ನರಸಿಂಹಸ್ವಾಮಿ ಹೇಳಿದರು.
ಅವರು ತಾಲ್ಲೂಕಿನ ದೊಡ್ಡಬೆಳವಂಗಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ವತಿಯಿಂದ ಭಕ್ತರಹಳ್ಳಿ ಗ್ರಾಮದಲ್ಲಿ ಪ್ರಾರಂಭವಾದ ವಿಶೇಷ ಸೇವಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
`ನಗರ ಪ್ರದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಗ್ರಾಮೀಣ ಬದುಕಿನ ಅರಿವು ಇರಬೇಕು. ಇಲ್ಲವಾದರೆ ನಗರ ಮತ್ತು ಗ್ರಾಮೀಣ ಪ್ರದೇಶದ ತಾರತಮ್ಯವನ್ನು ಹೋಗಲಾಡಿಸಲು ಸಾಧ್ಯವಿಲ್ಲ~ ಎಂದರು.
ವಿದ್ಯಾರ್ಥಿಗಳು ಓದುವುದರರೊಂದಿಗೆ ಪರಿಸರ ರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಗ್ರಾಮೀಣ ಜನರು ಸಹ ನೈರ್ಮಲ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬಾರದು. ಪ್ರತಿಯೊಂದಕ್ಕೂ ಸರ್ಕಾರದ ನೆರವಿಗೆ ಕಾಯದೆ ಸಮುದಾಯದ ಸಹಕಾರ ಪಡೆದು ಗ್ರಾಮಗಳ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಸೇವಾ ಕಾರ್ಯಗಳಿಂದ ಮನುಷ್ಯನಿಗೆ ಆನಂದ ದೊರೆಯಲಿದೆ~ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಹನುಮಂತೇಗೌಡ,ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ, ಕಾಲೇಜಿನ ಪ್ರಾಂಶುಪಾಲ ಅಬ್ದುಲ್ಕರೀಂ, ಶಿಬಿರಾಧಿಕಾರಿ ಶಾಂತಪ್ಪ ಚಲವಾದಿ, ಎಪಿಎಂಸಿ ಉಪಾಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ಶಾಲಾಭಿವೃದ್ದಿ ಸಮಿತಿ ಬಿ.ಎಸ್.ಚನ್ನೇಗೌಡ, ರಾಮಕೃಷ್ಣಯ್ಯ, ಗಂಗಾಧರಯ್ಯ, ರಾಜಗೋಪಾಲ್ ಮುಂತಾದವರು ಭಾಗವಹಿಸಿದ್ದರು. ಸಂವಾದ ಮತ್ತು ಅರಳಿಕಟ್ಟೆ ಬಳಗದ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಉದ್ಘಾಟನಾ ಸಮಾರಂಭ
ದೊಡ್ಡಬಳ್ಳಾಪುರ: ಚವಾದಿ ಮಹಾಸಭಾ ಸರ್ಕಾರಿ ನೌಕರರ ಘಟಕದ ಉದ್ಘಾಟನಾ ಸಮಾರಂಭವು ಭಾನುವಾರ ಬೆಳಿಗ್ಗೆ 10.30ಕ್ಕೆ ನಗರದ ಕನ್ನಡ ಭವನದಲ್ಲಿ ನಡೆಯಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ತಾಲ್ಲೂಕು ಚಲವಾದಿ ಮಹಾಸಭಾ ಅಧ್ಯಕ್ಷ ಜಿ.ಲಕ್ಷ್ಮೀಪತಿ ವಹಿಸಲಿದ್ದಾರೆ. ಶಿಲ್ಪಕಲಾ ಅಕಾಡಮಿ ರಿಜಿಸ್ಟ್ರಾರ್ ತ್ಯಾಗರಾಜ್ ಉದ್ಘಾಟಸಲಿದ್ದಾರೆ. ಮುಖ್ಯಭಾಷಣಕಾರರಾಗಿ ಡಾ.ಕೆ.ಕೃಷ್ಣಪ್ಪ ಮತ್ತಿತರರು ಭಾಗವಹಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.