ನವದೆಹಲಿ(ಪಿಟಿಐ): ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಲು ಮತ್ತು ಹೂಡಿಕೆ ಆಕರ್ಷಿಸಲು `ಭಾರತೀಯ ರಿಸರ್ವ್ ಬ್ಯಾಂಕ್'(ಆರ್ಬಿಐ) ಪ್ರಸಕ್ತ ಹಣಕಾಸು ವರ್ಷದಲ್ಲಿ ಬಡ್ಡಿ ದರವನ್ನು ಒಟ್ಟಾರೆ ಶೇ 1ರಷ್ಟು ತಗ್ಗಿಸಬೇಕು ಎಂದು ಭಾರತೀಯ ಕೈಗಾರಿಕಾ ಒಕ್ಕೂಟ(ಸಿಐಐ) ಆಗ್ರಹಿಸಿದೆ.
ಮುಂದಿನ ಎರಡು ವರ್ಷಗಳಲ್ಲಿ ಒಟ್ಟಾರೆ ರಾಷ್ಟ್ರೀಯ ಉತ್ಪನ್ನ(ಜಿಡಿಪಿ) ಶೇ 8ರಿಂದ ಶೇ 9ರಷ್ಟು ಪ್ರಗತಿ ದಾಖಲಿಸಬೇಕಾದರೆ ಬಡ್ಡಿದರ ಕಡಿತ ಅನಿವಾರ್ಯ. ಜತೆಗೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ), ನೇರ ತೆರಿಗೆ ನೀತಿ ಸಂಹಿತೆ(ಡಿಟಿಸಿ)ಯನ್ನು ಆದಷ್ಟು ಬೇಗ ಜಾರಿಗೊಳಿಸಬೇಕು ಎಂದು `ಸಿಐಐ' ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.
`ಆರ್ಬಿಐ' ಬಡ್ಡಿದರವನ್ನು ಶೇ 1ರಷ್ಟು ತಗ್ಗಿಸಿದರೆ ದೇಶದ `ಜಿಡಿಪಿ' ಶೇ 1ರಿಂದ ಶೇ 1.5ರಷ್ಟು ಚೇತರಿಕೆ ಕಾಣಲಿದೆ. ಸಗಟು ಹಣದುಬ್ಬರ ಇಳಿದಿರುವುದರಿಂದ ಇದನ್ನು ನಾವು ನಿರೀಕ್ಷಿಸಬಹುದು ಎಂದು ಅವರು ಹೇಳಿದರು.
ವಿಮೆ, ಬ್ಯಾಂಕಿಂಗ್ ಮತ್ತು ಪಿಂಚಣಿ ವಲಯಗಳಲ್ಲಿ ವಿದೇಶಿ ನೇರ ಬಂಡವಾಳ (ಎಫ್ಡಿಐ) ಹೂಡಿಕೆಗೆ ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದರು.