ಬೆಂಗಳೂರು: ಎನ್.ಆರ್.ಚೌಕದ ಕಾರ್ಪೊರೇಷನ್ ಬ್ಯಾಂಕ್ ಎಟಿಎಂ ಘಟಕದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆದು 28 ದಿನಗಳು ಕಳೆದರೂ, ಆರೋಪಿಯ ಭಾವಚಿತ್ರ ಹೊರತುಪಡಿಸಿ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ. ಆತನ ಪತ್ತೆಗಾಗಿ ಆಂಧ್ರಪ್ರದೇಶ ಹಾಗೂ ತಮಿಳುನಾಡಿಗೆ ತೆರಳಿದ್ದ ತನಿಖಾ ತಂಡಗಳು ಇದೀಗ ಬರಿಗೈಲಿ ನಗರಕ್ಕೆ ಹಿಂದಿರುಗಿವೆ.
‘ಆರೋಪಿಯ ಪತ್ತೆಗೆ ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮೀಷನರ್ ನೇತೃತ್ವದಲ್ಲಿ ಹಲವು ತಂಡಗಳನ್ನು ರಚಿಸಲಾಗಿದ್ದು, 200 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಆತ ಅನಂತಪುರ ಜಿಲ್ಲೆಯಲ್ಲೂ ಇಂತಹ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಈವರೆಗಿನ ತನಿಖೆಯಿಂದ ಗೊತ್ತಾಗಿದೆ. ಆಂಧ್ರಪ್ರದೇಶ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಎಟಿಎಂ ಘಟಕದ ಸಿ.ಸಿ. ಟಿ.ವಿ ಕ್ಯಾಮೆರಾದಲ್ಲಿ ಲಭ್ಯವಾದ ಭಾವಚಿತ್ರ ಹೊರತುಪಡಿಸಿ ಆರೋಪಿಯ ಹೆಸರು, ವಿಳಾಸ ಹಾಗೂ ಹಿಂದಿನ ಚಟುವಟಿಕೆಗಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ’ ಎಂದು ನಗರ ಪೊಲೀಸ್ ಕಮಿನಷರ್ ರಾಘವೇಂದ್ರ ಔರಾದಕರ್ ತಿಳಿಸಿದ್ದಾರೆ.
‘ಕರ್ನಾಟಕ, ತಮಿಳುನಾಡು ಹಾಗೂ ಆಂದ್ರಪ್ರದೇಶಗಳಲ್ಲಿ ಆರೋಪಿಯ ಚಹರೆ ಹಾಗೂ ವಿವರಗಳುಳ್ಳ ಭಿತ್ತಿಪತ್ರಗಳನ್ನು ಸಾರ್ವಜನಿಕವಾಗಿ ಹಂಚಲಾಗಿದೆ. ಜತೆಗೆ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯ ವಾಹಿನಿಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ’ ಎಂದರು.
ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಈವರೆಗೆ ಆರೋಪಿಯ ಮುಖ ಚಹರೆ ಹೋಲುವ ಎಂಟು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಆದರೆ, ಎಟಿಎಂ ಘಟಕದ ಹಲ್ಲೆ ಆರೋಪಿಯ ಸಣ್ಣ ಸುಳಿವು ಸಿಗಲಿಲ್ಲ. ಮಾನಸಿಕ ಅಸ್ವಸ್ಥನಂತೆ ಕಾಣುವ ಆತ, ಮೊಬೈಲ್ ಕೂಡ ಬಳಕೆ ಮಾಡುವುದಿಲ್ಲ. ಹೀಗಾಗಿ ತನಿಖೆಗೆ ಹಿನ್ನಡೆಯಾಗಿದೆ. ತನಿಖಾ ತಂಡಗಳು ಮೂರು ದಿನಗಳ ಹಿಂದೆಯೇ ನಗರಕ್ಕೆ ವಾಪಸಾಗಿದ್ದು, ಪ್ರಾಥಮಿಕ ಹಂತದಿಂದ ಕಾರ್ಯಾಚರಣೆ ಆರಂಭಿಸಲು ನಿರ್ಧರಿಸಲಾಗಿದೆ’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.