ತುಮಕೂರು: ತುಂಗಾಭದ್ರಾ ಜಲಾಶಯದಿಂದ ಬಳ್ಳಾರಿ, ತುಮಕೂರು ಜಿಲ್ಲೆಯ ಪಾವಗಡಕ್ಕೆ ಕುಡಿಯುವ ನೀರು ಯೋಜನೆಗೆ ಕರ್ನಾಟಕ ಸರ್ಕಾರ ಒಪ್ಪುವುದಾದರೆ ಯೋಜನೆಯ ಅರ್ಧದಷ್ಟು ಹಣವನ್ನು ಆಂಧ್ರ ಸರ್ಕಾರ ಭರಿಸಲಿದೆ ಎಂದು ಆಂಧ್ರದ ಕಂದಾಯ ಸಚಿವ ರಘುವೀರ ರೆಡ್ಡಿ ತಿಳಿಸಿದರು.
ಶಿರಾದಲ್ಲಿ ಭಾನುವಾರ ನಡೆದ ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ಕುಡಿಯುವ ನೀರು ಹರಿಸುವ ಮತ್ತು ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ತುಂಗಭದ್ರಾ ಜಲಾಶಯದಿಂದ ಪಾವಗಡಕ್ಕೆ ಕುಡಿಯುವ ನೀರು ಕೊಡುವಂತೆ ಪಾವಗಡ ತಾಲ್ಲೂಕಿನ ಜನರು ತಮ್ಮನ್ನು ಬಂದು ಭೇಟಿಯಾಗಿದ್ದರು. ಕರ್ನಾಟಕ ಸರ್ಕಾರ ಒಪ್ಪಿದರೆ ಆಂಧ್ರ ಸರ್ಕಾರ ಯೋಜನೆಯ ಜಾರಿಗೆ ಬೇಕಾದ ಭೂಮಿ, ವೆಚ್ಚದ ಅರ್ಧದಷ್ಟು ಹಣವನ್ನು ಭರಿಸುತ್ತದೆ ಎಂದು ನಿಯೋಗಕ್ಕೆ ಭರವಸೆ ನೀಡಿದ್ದೆ. ಅದೇ ನಿಯೋಗ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ವಿಷಯ ತಿಳಿಸಿದೆ.
ಯೋಜನೆ ಜಾರಿ ಸಂಬಂಧ ಸಚಿವ ಬೊಮ್ಮಾಯಿ ಅವರಿಂದ ಪತ್ರ ಬಂದಿದ್ದು, ಮಾತುಕತೆಗೆ ಕರೆಯುವುದಾಗಿ ತಿಳಿಸಿದ್ದಾರೆ ಎಂದರು.
ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಮಾಡಬಾರದು. ಪಾವಗಡವು ಮರುಭೂಮಿಯಂತಿದೆ. ಅಲ್ಲಿನ ಜನರಿಗೆ ನೀರಿನ ಅಗತ್ಯವಿದೆ. ತುಂಗಾಭದ್ರಾ ಜಲಾಶಯದಿಂದ ಸಮಾನಾಂತರ ನಾಲೆ ತೆಗೆಯುವ ಮೂಲಕ ನೀರು ಹರಿಸಬಹುದಾಗಿದೆ. ಯೋಜನೆಗೆ ಸಹಕರಿಸುವಂತೆ ನಿಮ್ಮ ಮುಖ್ಯಮಂತ್ರಿಗೆ ಹೇಳಿ ಎಂದು ಸಮಾರಂಭದಲ್ಲಿದ್ದ ಸಮಾಜ ಕಲ್ಯಾಣ ಇಲಾಖೆ ಸಚಿವ ಎ. ನಾರಾಯ ಣಸ್ವಾಮಿ ಅವರಿಗೆ ಮನವಿ ಮಾಡಿದರು.
ನೇತ್ರಾವತಿಗೆ ಪಟ್ಟು: ನೇತ್ರಾವತಿ ತಿರುವು ಯೋಜನೆ ಜಾರಿ ಮಾಡುವುದಾಗಿ ತಿಪಟೂರಿನಲ್ಲಿ ಹೇಳಿ ಮತ್ತೆ ಮಾತು ಬದಲಾಯಿಸಿದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ವಿರುದ್ಧ ಬಿಜೆಪಿ ಸಂಸದ ಜಿ.ಎಸ್. ಬಸವರಾಜು ತೀವ್ರ ಅಸಮಾಧಾನ ಹೊರಹಾಕಿದರು.
ನೇತ್ರಾವತಿ ನದಿ ನೀರಿಗೆ ಹೋರಾಟ ತೀವ್ರಗೊಳಿಸಬೇಕಾದ ಅಗತ್ಯವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಶಾಸಕ ಟಿ.ಬಿ.ಜಯಚಂದ್ರ ಮತ್ತಿತರರು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ನೆರವೇರಿಸಬೇಕಾಗಿತ್ತು. ಮುಖ್ಯಮಂತ್ರಿಯವರು ಕಾರ್ಯಕ್ರಮಕ್ಕೆ ಬಾರದಂತೆ ಬಿಜೆಪಿಯ ಸಂಸದರು, ಶಾಸಕರು ತಡೆದಿರುವುದು ಸರಿಯಲ್ಲ ಎಂದು ಶಾಸಕ ಡಿ.ಕೆ. ಶಿವಕುಮಾರ್ ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.