ಬಸವಕಲ್ಯಾಣ: ಸರ್ಕಾರ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಶೀಘ್ರ ಜಾರಿಗೊಳಿಸಲು ಒತ್ತಾಯಿಸಿ ಅಕ್ಟೋಬರ್ 25 ರಂದು ಇಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮತ್ತು ಆದಿಜಾಂಬವ ಮಾದಿಗ ಸಮಾಜ ಸಂಘದಿಂದ ಸಂಯುಕ್ತವಾಗಿ ಜಿಲ್ಲಾ ಮಟ್ಟದ ತಮಟೆ ಚಳವಳಿ ಮತ್ತು ಪ್ರತಿಭಟನಾ ರ್ಯಾಲಿ ನಡೆಸಲಾಗುತ್ತಿದೆ.
ಈ ಸಂಬಂಧ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ರಾಜೀವ ಕಡ್ಯಾಳ, ಕಾರ್ಯಾಧ್ಯಕ್ಷ ಅರ್ಜುನ ಕನಕ, ತಾಲ್ಲೂಕು ಅಧ್ಯಕ್ಷ ಅಶೋಕ ಸಂಗನೂರೆ, ಆದಿ ಜಾಂಬವ ಮಾದಿಗ ಸಮಾಜ ಸಂಘದ ತಾಲ್ಲೂಕು ಅಧ್ಯಕ್ಷ ಯುವರಾಜ ಭೆಂಡೆ ಅವರು ಜಂಟಿ ಪ್ರಕಟಣೆ ಹೊರಡಿಸಿ ಈ ವಿಷಯ ತಿಳಿಸಿದ್ದಾರೆ.
ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರು ಅಸ್ಪೃಶ್ಯರಿಗೆ ಸಾಮಾಜಿಕ ನ್ಯಾಯ ದೊರಕಿಸಿ ಕೊಡುವ ಸಲುವಾಗಿ ಮೀಸಲಾತಿ ವ್ಯವಸ್ಥೆ ಕಲ್ಪಿಸಿದ್ದಾರೆ. ಆದರೆ ಸೌಲಭ್ಯಗಳು ಕೆಲ ಸಮುದಾಯದ ಮಾತ್ರ ಪಾಲಾಗುತ್ತಿದ್ದು ದಲಿತರಲ್ಲಿಯೇ ಕೆಲವರಿಗೆ ಸೌಲಭ್ಯಗಳು ದೊರಕುತ್ತಿಲ್ಲ.
ಈ ತಾರತಮ್ಯ ಹೊಗಲಾಡಿಸಲು ಸರ್ಕಾರ ಎ.ಜೆ.ಸದಾಶಿವ ಆಯೋಗ ರಚಿಸಿ ಸರ್ವರಿಗೂ ನ್ಯಾಯ ಒದಗಿಸಲು ಪ್ರಯತ್ನಿಸಿದ್ದೇನೋ ನಿಜ. ಆದರೆ ಆಯೋಗದ ವರದಿಯನ್ನು ಜಾರಿಗೊಳಿಸಲು ಮೀನಮೇಷ ಎಣಿಸಲಾಗುತ್ತಿದೆ. ಆದ್ದರಿಂದ ಅದನ್ನು ಜಾರಿಗೊಳಿಸಲು ಒತ್ತಾಯಿಸಿ ಇಲ್ಲಿ ನಡೆಸುತ್ತಿರುವ ರ್ಯಾಲಿಯಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ವಿನಂತಿಸಲಾಗಿದೆ.