ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಬಸವರಾಜಪುರ ಗ್ರಾಮದಲ್ಲಿ ಐತಿಹಾಸಿಕ ಮಹತ್ವದ ವರ್ಧಮಾನ ಮಹಾವೀರ ಮತ್ತು ಇತರ ತೀರ್ಥಂಕರರ ವಿಗ್ರಹಗಳು ನಿರ್ಲಕ್ಷ್ಯಕ್ಕೆ ಒಳಗಾಗಿ ಎಲ್ಲೆಂದರಲ್ಲಿ ಅನಾಥವಾಗಿ ಬಿದ್ದಿವೆ.
ಇಂದು ಸುಮಾರು 2 ಸಾವಿರ ಜನಸಂಖ್ಯೆ ಹೊಂದಿದ ಈ ಗ್ರಾಮದಲ್ಲಿ ಶತಮಾನಗಳ ಹಿಂದೆ ಜೈನ ಸಮುದಾಯದ ಕೆಲವು ಕುಟುಂಬಗಳು ವಾಸವಾಗಿದ್ದವು.
ಹೀಗಾಗಿ ಜೈನ ಬಸದಿ ಇತ್ತು. ಕಾಲಾನುಕ್ರಮದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಯಿತು. ಅಳಿದುಳಿದ ಕೆಲ ವಿಗ್ರಹಗಳನ್ನು ಬಿಟ್ಟರೆ ಬಸದಿ ಮಣ್ಣಿನಲ್ಲಿ ಹೂತಿದೆ. ಅಲ್ಲೆಲ್ಲ ತಿಪ್ಪೆಗುಂಡಿಗಳು ತಲೆ ಎತ್ತಿವೆ.
ಅದರ ಅವಶೇಷಗಳನ್ನು ಕೆಲವರು ಹೊತ್ತೊಯ್ದು ಮನೆ ಕಟ್ಟಲು ಬಳಸಿಕೊಂಡಿದ್ದಾರೆ. ಕೆಲ ಅವಶೇಷಗಳು ದನ ಕಟ್ಟಲು, ಗೊಬ್ಬರ ರಕ್ಷಣೆ ಮಾಡಲು ಉಪಯೋಗವಾಗುತ್ತಿವೆ. ಇವ್ಯಾವುದಕ್ಕೂ ಬಳಕೆಯಾಗದ ಕೆಲ ವಿಗ್ರಹಗಳು ಮಾತ್ರ ಅಲ್ಲಲ್ಲಿ ಅನಾಥವಾಗಿ ಬಿದ್ದಿವೆ.
ಗ್ರಾಮದಲ್ಲಿ ಈಗ ಒಂದೇ ಒಂದು ಜೈನ ಕುಟುಂಬ ಇಲ್ಲ.
ಇದರಿಂದ ಬಸದಿಯ ಪುನರುಜ್ಜೀವನದತ್ತ ಆಸಕ್ತಿ ವಹಿಸುವವರು ಯಾರೂ ಇಲ್ಲವಾಗಿದೆ. ಪುರಾತತ್ವ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಿರ್ಲಕ್ಷ್ಯದಿಂದಾಗಿ ಗ್ರಾಮದ ಐತಿಹಾಸಿಕ ಪುಟಗಳೇ ಮಣ್ಣಿನಲ್ಲಿ ಮುಚ್ಚಿಹೋಗುತ್ತಿದೆ.ಗ್ರಾಮದಲ್ಲಿ ಉತ್ಖನನ ನಡೆಸಿದರೆ ಇನ್ನಷ್ಟು ಅವಶೇಷಗಳು ಸಿಗಬಹುದು.