ರಾಣೆಬೆನ್ನೂರು: ನಗರದಲ್ಲಿ ಜಗಜ್ಯೋತಿ ಬಸವೇಶ್ವರರ ಭವ್ಯ ಮೂರ್ತಿಯ ಮತ್ತು ಭಾಚಿತ್ರದ ಮೆರವಣಿಗೆಯು ದೊಡ್ಡಪೇಟೆಯ ಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಸಕಲ ವಾದ್ಯಗಳೊಂದಿಗೆ ಮೇಡೇರಿ ರಸ್ತೆಯ ಆಂಗ್ಲೋ ಉರ್ದು ಪ್ರೌಢ ಶಾಲೆಯ ಆವರಣದವರೆಗೂ ಸಾಗಿತು.
ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಬಸವಣ್ಣನವರ ವಚನ ಗ್ರಂಥಗಳನ್ನು ತಲೆ ಮೇಲೆ ಹೊತ್ತು ನಡೆದರು. ಕುಂಭ, ಕಳಸ, ಕನ್ನಡಿಗಳೊಂದಿಗೆ ಅಕ್ಕನ ಬಸವನ ಬಳಗದ ಮಹಿಳಾ ಸದಸ್ಯೆಯರ ಸಮವಸ್ತ್ರದೊಂದಿಗೆ ವಚನಗಳನ್ನು ಹೇಳುತ್ತಾ ಸಾಗಿದರು.
ಅಟವಾಳಗಿ ಸಹೋದರರ ಪುರುವಂತಿಗೆ, ಕುದುರೆ ಕುಣಿತ, ಮಹಿಳಾ ಡೊಳ್ಳು, ನಂದಿಕೋಲು, ಜೋಯಿಸರಹರಳ್ಳಿ ಭಜನೆ, ಕರಡಿ ಮಜಲು ಮೆರವಣಿಗೆಯುದ್ದಕ್ಕೂ ಮೆರಗು ನೀಡಿದವು. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ದೊಡ್ಡಪೇಟೆ ಗುರುಬಸವ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ಶಾಸಕ ಜಿ. ಶಿವಣ್ಣ, ಕೆ.ಎನ್. ಕೋರಧಾನ್ಯಮಠ, ಚಂದ್ರಣ್ಣ ಸೊಪ್ಪಿನ, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಕೆ. ಶಿವಲಿಂಗಪ್ಪ, ನಗರಸಭಾ ಸದಸ್ಯರಾರ ಮಂಜುನಾಥ ಗೌಡಶಿವಣ್ಣನವರ, ಬಸವರಾಜ ರೊಡ್ಡನವರ, ಉಮೇಶ ಹೊನ್ನಾಳಿ, ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷೆ ಭಾರತಿ ಜಂಬಿಗಿ, ಡಾ. ಬಸವರಾಜ ಕೇಲಗಾರ, ಡಾ. ಮೋಹನ ಹಂಡೆ, ಏಕನಾಥ ಭಾನುವಳ್ಳಿ, ವಾಸಣ್ಣ ಕುಸಗೂರ, ಎ.ಎ. ನಾಯಕ, ಮಲ್ಲಿಕಾರ್ಜುನ ಅರಳಿ, ರಾಜಣ್ಣ ಮೋಟಗಿ, ಗಾಯತ್ರಮ್ಮ ಕುರುವತ್ತಿ, ವಿಶ್ವನಾಥ ಜಂಬಗಿ, ಗೀತಾ ಜಂಬಿಗಿ, ಇಂದಿರಾ ಗಡ್ಡದಗೂಳಿ, ಕರಬಸಪ್ಪ ಮಾಕನೂರು, ಪ್ರಭು ಕರ್ಜಿಗಿಮಠ ಮತ್ತಿತರರು ಉಪಸ್ಥಿದ್ದರು.