ಕೊಪ್ಪಳ: ಗ್ರಾಮದ ಮಾರುತಿ ದೇವಸ್ಥಾನ ಬಳಿ ಇರುವ ಗ್ರಂಥಾಲಯದ ಹತ್ತಿರ ಸಾರಿಗೆ ಸಂಸ್ಥೆಯ ಬಸ್ಸುಗಳ ನಿಲುಗಡೆಯನ್ನು ಪುನಃ ಆರಂಭಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಕಿನ್ನಾಳ ಗ್ರಾಮದಲ್ಲಿ ಗುರುವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ (ಎಬಿವಿಪಿ) ಗ್ರಾಮ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಗ್ರಂಥಾಲಯದ ಬಳಿಯೇ ಕೆಲ ಕಾಲ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದ ಕಾರ್ಯಕರ್ತರು ನಂತರ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ತೆರಳಿ ಮನವಿಪತ್ರ ಸಲ್ಲಿಸಿದರು.ಘಟಕದ ಸಹ ಕಾರ್ಯದರ್ಶಿ ಮೌನೇಶ ಕಮ್ಮಾರ ಮಾತನಾಡಿ, ವ್ಯಕ್ತಿಯೊಬ್ಬ ಸಾರಿಗೆ ಸಂಸ್ಥೆಯ ಬಸ್ಸಿನ ಚಾಲಕನೊಂದಿಗೆ ಜಗಳವಾಡಿದ್ದನ್ನೇ ನೆಪ ಮಾಡಿಕೊಂಡು ಈಗ ಈ ಸ್ಥಳದಲ್ಲಿ ಬಸ್ಸುಗಳ ನಿಲುಗಡೆಯನ್ನೇ ರದ್ದುಗೊಳಿಸಿರುವುದು ಸರಿಯಲ್ಲ ಎಂದರು.
ಬಸ್ಸುಗಳ ನಿಲುಗಡೆ ರದ್ದುಗೊಂಡಿರುವ ಕಾರಣ ಗ್ರಾಮದಿಂದ ನಿತ್ಯವೂ ಕೊಪ್ಪಳದಲ್ಲಿರುವ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಬಸ್ಸುಗಳ ನಿಲುಗಡೆಯನ್ನು ಕೂಡಲೇ ಮತ್ತೆ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಅಲ್ಲದೇ, ಶಾಸಕರ ಅನುದಾನದಡಿ ಸದರಿ ಸ್ಥಳದಲ್ಲಿ ಬಸ್ ತಂಗುದಾಣವನ್ನು ಸಹ ನಿರ್ಮಿಸಬೇಕು ಎಂದು ಮನವಿ ಮಾಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಭೈರೇಶ ಅವರು, ಮೇಲಧಿಕಾರಿಗಳ ಗಮನಕ್ಕೆ ತಂದು ಈ ಸಮಸ್ಯೆಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.ಸಂಘಟನೆಯ ಮುಖಂಡರಾದ ಲಿಂಗರಾಜ ಎಸ್, ಶ್ರೀನಿವಾಸ ಸಿ., ರಮೇಶ ಎಚ್., ಸಿದ್ದಣ್ಣ ಲಕ್ಕುಂಡಿ, ರಮೇಶ ಕೋವಿ ನೇತೃತ್ವ ವಹಿಸಿದ್ದರು.