ಇತ್ತೀಚಿನ ದಿನಗಳಲ್ಲಿ ಬಸ್ಗಳಲ್ಲಿ ಪ್ರಯಾಣಿಸುವುದು ಹಳೇ ಕಾಲದಂತಿಲ್ಲವೆಂದರೆ ತಪ್ಪಾಗಲಾರದು. ನಿಗದಿ ಪಡಿಸಿದ ವೇಳೆಗೆ ಬಸ್ಗಳು ಬಂದು ಹೋದರೆ ಅದು ಪ್ರಯಾಣಿಕರ ಅದೃಷ್ಟವೋ ಅದೃಷ್ಟ. ಒಂದೊಂದು ಬಸ್ಸಿನಲ್ಲಿ ನಾಲ್ಕು ಬಸ್ಸಿನ ಪ್ರಯಾಣಿಕರು ಇರುತ್ತಾರೆ.
ಈ ದಟ್ಟಣೆ ಮಧ್ಯೆ ವಯಸ್ಸಾದವರು, ಮಹಿಳೆಯರು ಮಕ್ಕಳನ್ನು ಎತ್ತಿಕೊಂಡು ಕೂಡಲು ಸ್ಥಳಾವಕಾಶವಿಲ್ಲದೆ ನಿಂತು ಪ್ರಯಾಣಿಸುವುದನ್ನು ಗಮನಿಸಿರುವಿರಾ? ನಿಗದಿ ಪಡಿಸಿರುವ ಸ್ಥಳಗಳಲ್ಲಿ ಬಸ್ಗಳು ನಿಲ್ಲಿಸದೆ ತುಂಬಾ ಮುಂದೆ ಹೋಗಿ ನಿಲ್ಲಿಸುವುದರಿಂದ ನಡೆಯಲಾಗದ ವಯಸ್ಸಾದವರು ಹಾಗೂ ರೋಗರುಜಿನಗಳಿಂದ ನರಳುತ್ತಿರುವವರ ಬಗ್ಗೆ ಯೋಚಿಸಿರುವಿರಾ? ಖಂಡಿತ ಇಲ್ಲ.
ಹಣ ಸಂಪಾದನೆ ಮಾಡಿ ಸೈ ಅನ್ನಿಸಿಕೊಳ್ಳಬೇಕೆನ್ನುವ ಅಧಿಕಾರಸ್ಥರಿಗೆ ಸಾರ್ವಜನಿಕರ ಬವಣೆ ಹೇಗೆ ತಾನೆ ತಿಳಿದೀತು?
- ಕೆ. ಆರ್. ರಾಘವೇಂದ್ರರಾವ್
ಬಸ್ ವಿಸ್ತರಿಸಿ
ಈಗ್ಗೆ 15 ದಿನಗಳಿಂದ ಯಲಹಂಕ ರಸ್ತೆಯಲ್ಲಿರುವ ಬ್ಯಾಟರಾಯನಪುರದಿಂದ ಕಣ್ಣೂರು ಹಾಗೂ ಶ್ರೀರಾಂಪುರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಬಿಎಂಟಿಸಿ ಬಸ್ `ಬಿ ಜಿ 11~ ಎಂಬ ನಾಮಫಲಕದೊಡನೆ ಸಂಚರಿಸುತ್ತಿದೆ. ಆದರೆ ಅವು ಕೇವಲ 300-500 ಜನಸಂಖ್ಯೆ ಇರುವ ಹಳ್ಳಿಗಳು.
ಹೀಗಾಗಿ ಆ ಬಸ್ಸುಗಳನ್ನು ಬ್ಯಾಟರಾಯನಪುರಕ್ಕೆ ಸೀಮಿತಗೊಳ್ಳದೇ ಮೇಖ್ರಿ ವೃತ್ತದವರೆಗೆ ವಿಸ್ತರಿಸಿದರೆ ಅಥವಾ ಸಿಟಿ ಮಾರುಕಟ್ಟೆ, ಮೆಜೆಸ್ಟಿಕ್, ಶಿವಾಜಿನಗರಕ್ಕೆ ವಿಸ್ತರಿಸಿದರೆ ಅನುಕೂಲವಾಗುತ್ತೆ. ಇಲ್ಲವಾದಲ್ಲಿ ಬಿಎಂಟಿಸಿಗೇ ನಷ್ಟ. ಸಂಬಂಧಪಟ್ಟವರು ಗಮನ ಹರಿಸಲಿ.
- ಡಾ. ವಿ.ಎನ್. ಹೆಗಡೆ