ನೆಲಮಂಗಲ: ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿಲುಗಡೆಗೆ ಆಗ್ರಹಿಸಿ ಮತ್ತು ಚಾಲಕ ನಿರ್ವಾಹಕರ ಧೋರಣೆಯನ್ನು ಖಂಡಿಸಿ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಗುರುವಾರ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು.
ಪಟ್ಟಣದ ಸೊಂಡೆಕೊಪ್ಪ ವೃತ್ತದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬಳಿಯ ಚತುಷ್ಪಥ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ತಡೆ ನಡೆಸಿದರು. ತುಮಕೂರಿನ ವಿವಿಧ ಕಾಲೇಜುಗಳಿಗೆ ತೆರಳಲೆಂದು ಕಾಯ್ದು ನಿಂತಿದ್ದ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಬಸ್ ಬಾರದ್ದರಿಂದ ಆಕ್ರೋಶಗೊಂಡು ರಸ್ತೆಗೆ ಅಡ್ಡಲಾಗಿ ನಿಂತು ಪ್ರತಿಭಟಿಸಿದರು. ಹೆದ್ದಾರಿಯನ್ನು ಬಂದ್ ಮಾಡಿ ಸರ್ಕಾರ ಮತ್ತು ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಿಂದಾಗಿ ಒಂದೂವರೆ ತಾಸು ಕಾಲ ಸಂಚಾರ ಅಸ್ತವ್ಯಸ್ತವಾಯಿತು. ಸುಮಾರು 4ಕಿ.ಮೀ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಸ್ನಲ್ಲಿದ್ದ ಪ್ರಯಾಣಿಕರು ಪರದಾಡುವಂತಾಯಿತು. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿ ಸಂಚಾರ ಸುಗಮಗೊಳಿಸಿದರು.
‘ಕೆಲವು ಬಸ್ಗಳನ್ನು ಹೊರತುಪಡಿಸಿ ಈ ಮಾರ್ಗದಲ್ಲಿ ಸಂಚರಿಸುವಎಲ್ಲ ಬಸ್ಗಳು ಪಟ್ಟಣದ ಸೊಂಡೆಕೊಪ್ಪ ಮತ್ತು ಕುಣಿಗಲ್ ಸರ್ಕಲ್ ಬಳಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಬೇಕು ಎಂಬ ಆದೇಶ ಇದೆ. ಈ ಆದೇಶವನ್ನು ಚಾಲಕ ನಿರ್ವಾಹಕರು ಗಾಳಿಗೆ ತೂರಿದ್ದಾರೆ’ ಎಂದು ಪ್ರತಿಭಟನಾಕಾರ ಕೃಷ್ಣಮೂರ್ತಿ ದೂರಿದರು.